ದಾವಣಗೆರೆ: ಕುಡಿಯುವ ನೀರು ಹಾಗೂ ಕಸದ ಸಮಸ್ಯೆಗಳ ಪರಿಹಾರಕ್ಕೆ ತುರ್ತು ಗಮನ ಹರಿಸಿ ಎಂದು ಶಾಸಕ ಎಸ್.ಎ. ರವೀಂದ್ರನಾಥ್, ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ಪಾಲಿಕೆಯ ಆಯುಕ್ತ ಇಸ್ಲಾವುದ್ದೀನ್ ಗಡ್ಯಾಳ್ ಅವರ ಕಚೇರಿಗೆ ಸೋಮವಾರ ಭೇಟಿ ನೀಡಿ ಸಭೆ ನಡೆಸಿದ ಅವರು, ‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ಗಳಿಗೆ ಸಮಪರ್ಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಅಲ್ಲದೇ, ಹಲವಾರು ದಿನಗಳಿಂದ ಈ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಸಾರ್ವಜನಿಕರು ಈ ಬಗ್ಗೆ ನನಗೆ ದೂರು ನೀಡುತ್ತಿದ್ದಾರೆ. ಶೀಘ್ರ ಈ ಎರಡೂ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ‘ಕಳೆದ 10 ದಿನಗಳಿಂದ ಈ ವಾರ್ಡ್ಗಳಿಗೆ ನೀರು ಪೂರೈಕೆ ಆಗಿಲ್ಲ. ಕಸದ ರಾಶಿ ಎಲ್ಲಡೆ ಇದ್ದು, ಅಸ್ವಚ್ಛತೆ ಕಾಣಿಸುತ್ತಿದೆ. ಬೀದಿ ದೀಪಗಳ ದುರಸ್ತಿ ಆಗಿಲ್ಲ. ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಬಗ್ಗೆ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.
ಪಾಲಿಕೆ ಆಯುಕ್ತ ಇಸ್ಲಾವುದ್ದೀನ್ ಗಡ್ಯಾಳ್ ಪ್ರತಿಕ್ರಿಯಿಸಿ, ‘ಚುನಾವಣೆ ಪ್ರಕ್ರಿಯೆಗಳು ಈಗಷ್ಟೇ ಮುಗಿದಿವೆ. ಈ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ವಸ್ತುಸ್ಥಿತಿ ಅವಲೋಕಿಸುತ್ತೇನೆ. ಕುಡಿಯುವ ನೀರು ಪೂರೈಸಲು ತುರ್ತು ಕ್ರಮ ಕೈಗೊಳ್ಳುತ್ತೇನೆ. ಕಸದ ವಿಲೇವಾರಿಗೂ ಆದ್ಯತೆ ನೀಡುತ್ತೇನೆ’ ಎಂದು ಭರವಸೆ ನೀಡಿದರು.
ಬಿಜೆಪಿ ಮುಖಂಡರಾದ ಶಾಮನೂರು ಲಿಂಗರಾಜ್, ಆರ್. ರಾಜಶೇಖರ್, ಎಚ್.ಎನ್. ಗುರುನಾಥ್, ಧನಂಜಯ ಕಡ್ಲೆಬಾಳು, ರುದ್ರಮುನಿಸ್ವಾಮಿ, ಪಿ.ಎಸ್. ಜಯಂತ್, ಎಂ.ಪಿ. ಕೃಷ್ಣಮೂರ್ತಿ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.