ದಾವಣಗೆರೆ: ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ. ಸೋಮಶೇಖರ್ ಅವರು 45 ದಿನಗಳ ಹಿಂದೆ ಕಾಣೆಯಾಗಿದ್ದು, ಇದುವರೆಗೂ ಪತ್ತೆಯಾಗದ ಕಾರಣ ಅವರ ಕುಟುಂಬ ವರ್ಗದವರು ಆತಂಕದಲ್ಲಿದ್ದಾರೆ.
ಪೊಲೀಸ್ ಇಲಾಖೆಗೆ ಈ ಬಗ್ಗೆ ದೂರು ನೀಡಲಾಗಿದ್ದು ಇಲಾಖೆಯ ಅಧಿಕಾರಿಗಳೂ ಪತ್ತೆ ಕಾರ್ಯ ಕೈಗೊಂಡು ಸಹಕರಿಸುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಸುಳಿವು ದೊರೆತಿಲ್ಲ ಎಂದು ಸೋಮಶೇಖರ್ ಅವರ ಪತ್ನಿ ಸವಿತಾ, ತಮ್ಮ ಮಕ್ಕಳಾದ ನಿತಿನ್ ಹಾಗೂ ಶಿವಾನಿ ಅವರೊಂದಿಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಸೋಮಶೇಖರ್ ಜ. 19ರಂದು ಬೆಳಿಗ್ಗೆ ಹೊಟ್ಟೆ ನೋವಿನ ಕಾರಣ ಮನೆಯಲ್ಲಿ ವಿಶ್ರಾಂತಿ ಪಡೆಯು ತ್ತಿದ್ದರು. ಜಿಲ್ಲಾ ಪೊಲೀಸ್ ಕಚೇರಿಯಿಂದ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 3.15ರ ಸುಮಾರು ಕಚೇರಿಗೆ ಹೋಗುವುದಾಗಿ ತಿಳಿಸಿ ಬೈಕಿನಲ್ಲಿ ಹೋದವರು ಇದುವರೆಗೂ ವಾಪಸಾಗಿಲ್ಲ. ಈ ಬಗ್ಗೆ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸೋಮಶೇಖರ್ 13 ವರ್ಷಗಳಿಂದ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಾಣೆಯಾಗಿರುವುದಕ್ಕೆ ಕಾರಣ ತಿಳಿದಿಲ್ಲ. ಕುಟುಂಬ ವರ್ಗದವರು ಅವರ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸವಿತಾ ಅವರ ಸಂಬಂಧಿಗಳಾದ ಕೆ. ಶಿವರಾಮಪ್ಪ, ನಂದಿನಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.