ADVERTISEMENT

ಪಾರದರ್ಶಕ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 4:45 IST
Last Updated 16 ಜುಲೈ 2012, 4:45 IST

ಜಗಳೂರು: ತಾಲ್ಲೂಕಿನ ದೊಣೆಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂ ಅವ್ಯವಹಾರದ ಆರೋಪಗಳಿದ್ದು, ಈ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳ  ತಂಡದಿಂದ ತನಿಖೆ ನಡೆಸಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಮುಖಂಡ ದೊಣೆಹಳ್ಳಿ ಗುರುಮೂರ್ತಿ ಒತ್ತಾಯಿಸಿದರು.

ತಾಲ್ಲೂಕಿನ ಆಕನೂರು ಗ್ರಾಮದಲ್ಲಿ ಭಾನುವಾರ ಎಐಕೆಎಸ್ ಸಂಘಟನೆ ವತಿಯಿಂದ ಹಮ್ಮಿಕೊಂಡಿರುವ `ಜನಪರ ರೈತ ಜಾಥಾ~  ಉದ್ದೇಶಿಸಿ ಅವರು ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ದೊಣೆಹಳ್ಳಿ ಪಂಚಾಯ್ತಿಯಲ್ಲಿ ರೂ.1.65 ಕೋಟಿ ಅವ್ಯವಹಾರವಾಗಿದೆ.  ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಪಿಡಿಒ  ಅವರು ಶಾಮೀಲಾಗಿ ಉದ್ಯೋಗ ಖಾತ್ರಿ, ವಸತಿ ಮತ್ತು  ನೈರ್ಮಲ್ಯ ಯೋಜನೆ ಸೇರಿದಂತೆ ಹಲವು ಯೋಜನೆಗಳಲ್ಲಿ ಕೋಟಿಗಟ್ಟಲೆ ಹಣ ಲೂಟಿ ಮಾಡಿದ್ದಾರೆ. ಮೇಲ್ನೋಟಕ್ಕೆ ಅವ್ಯವಹಾರ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪಂಚಾಯ್ತಿಯ ಮಹತ್ವದ ದಾಖಲೆಗಳನ್ನು ತಾಲ್ಲೂಕು ಆಡಳಿತ ವಶಕ್ಕೆ ಪಡೆದಿದೆ ಎಂದು ಅವರು ಹೇಳಿದರು.

ಸಾರ್ವಜನಿಕ ಹಣವನ್ನು ಲಪಟಾಯಿಸಿರುವ ಅಧ್ಯಕ್ಷ ಮತ್ತು ಪಿಡಿಒ ಅವರ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳ  ನೇತೃತ್ವದಲ್ಲಿ ಪಾರದರ್ಶಕವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆರೋಪಿತರಿಗೆ ಶಿಕ್ಷೆಯಾಗುವವರೆಗೆ ಹೋರಾಟ ನಿರಂತವಾಗಿರುತ್ತದೆ ಎಂದು ಗುರುಮೂರ್ತಿ ಎಚ್ಚರಿಕೆ ನೀಡಿದರು.

ಎಐಕೆಎಸ್ ಜಿಲ್ಲಾ ಕಾರ್ಯದರ್ಶಿ ಹೊಸಳ್ಳಿ ಮಲ್ಲೇಶ್ ಮಾತನಾಡಿ, ಅತ್ಯಂತ ಹಿಂದುಳಿದ ತಾಲ್ಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿಯಾಗಬೇಕು. 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ ್ಙ 2 ಸಾವಿರ ಪಿಂಚಣಿ ನೀಡಬೇಕು.  ಪದವೀಧರರಿಗೆ ಯುವಕರಿಗೆ  ನಿರುದ್ಯೋಗ ಭತ್ಯೆ ಕೊಡಬೇಕು. ಭೂರಹಿತರಿಗೆ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

 ಅಖಿಲ ಭಾರತ ಕಿಸಾನ್ ಸಭಾ  ಜಿಲ್ಲಾ ಅಧ್ಯಕ್ಷ ಆವರಗೆರೆ ಉಮೇಶ್, ಅಖಿಲ ಭಾರತ ಪ್ರಗತಿಪರ ವೇದಿಕೆ(ಎಪಿಎಫ್) ಮುಖಂಡ ಎಲ್.ಪಿ. ಸುಭಾಷ್‌ಚಂದ್ರ ಬೋಸ್, ಇಪ್ಟಾ ಸಂಘಟನೆಯ ಷಣ್ಮುಖಸ್ವಾಮಿ, ಸಾಂಬಶಿವ ದಳವಾಯಿ, ಅಂಜಿನಪ್ಪ ಲೋಕಿಕೆರೆ, ಪ್ರಸನ್ನಕುಮಾರ್, ಎಐಎಸ್‌ಎಫ್ ಮುಖಂಡರಾದ ಸಿದ್ದೇಶ್, ಚೇತನ್ ಪಾಲ್ಗೊಂಡಿದ್ದರು.

ಜಾಥಾ: ದೊಣೆಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಿದ್ದಮ್ಮನಹಳ್ಳಿ, ಹೊಸೂರು, ಸುಭಾಷ್‌ನಗರ, ಕಾಮಗೇತನಹಳ್ಳಿ, ಮರೇನಹಳ್ಳಿ, ಹೊನ್ನಮರಡಿ, ಬಂಗಾರಕ್ಕನಗುಡ್ಡ ಗ್ರಾಮಗಳಲ್ಲಿೆರಡು ದಿನಗಳ ಕಾಲ ಜನಪರ ರೈತ ಜಾಥಾ ನಡೆಸಲಾಯಿತು. ಜುಲೈ 16ರಂದು ದೊಣೆಹಳ್ಳಿ ಗ್ರಾಮದಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.