ADVERTISEMENT

ಫಲಭರಿತ ಮಾವು ತುಂಬಿದ ತೋಟ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 10:44 IST
Last Updated 15 ಜೂನ್ 2013, 10:44 IST

ಚನ್ನಗಿರಿ:  ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ ತೋಟದಲ್ಲಿ ಮಾವು, ಹಲಸಿನ ಮರಗಳಲ್ಲಿ ಗೊಂಚಲು, ಗೊಂಚಲು ಹಣ್ಣು ಬಿಟ್ಟು ಕಂಗೊಳಿಸುತ್ತಿವೆ.

2004 ರಲ್ಲಿ ಈ ವಿದ್ಯಾಲಯದಲ್ಲಿ ವಿವಿಧ ರೀತಿಯ ಹಣ್ಣಿನ ಸಸಿಗಳನ್ನು ನೆಡಲಾಗಿತ್ತು.

100 ಮಾವು, 75 ಹಲಸು, 25 ನೇರಳೆ ಹಾಗೂ 25 ಸಸಿ ಬೆಟ್ಟದ ನೆಲ್ಲಿಕಾಯಿ ಸಸಿಗಳನ್ನು ಹಾಕಲಾಗಿತ್ತು. ಇದರ ಜತೆಗೆ ತೇಗ, ಬೇವು ಮುಂತಾದ 2000 ಕ್ಕಿಂತ ಹೆಚ್ಚು ಸಸಿಗಳನ್ನು ನೆಡಲಾಗಿತ್ತು. ಅಂದರೆ ಈ ವಿದ್ಯಾಲಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ತಲಾ ಒಂದು ಸಸಿ ನೆಟ್ಟು ಪಾಲನೆ ಫೋಷಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿರುತ್ತದೆ. ಈ ತೋಟದಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿ ಕೊಳ್ಳಲಾಗಿದೆ. ಇದುವರೆಗೂ ಯಾವುದೇ
ರಾಸಾಯನಿಕಗಳನ್ನು ಬಳಸಿರುವುದಿಲ್ಲ.

ಈಗ ಮಾವು ಹಾಗೂ ಹಲಸು ಹಣ್ಣು ಬಿಡಲು ಆರಂಭಿಸಿವೆ. ಇದುವರೆಗೆ 500 ಕೆ.ಜಿಗಿಂತಲೂ ಹೆಚ್ಚು ಮಾವಿನ ಹಣ್ಣುಗಳು ಬಿಟ್ಟಿವೆ. ಈ ಎಲ್ಲಾ ಮಾವಿನ ಹಣ್ಣುಗಳನ್ನು ಹಣ್ಣು ಮಾಡಿ, ನಂತರ ವಿದ್ಯಾಲಯದಲ್ಲಿರುವ 480 ವಿದ್ಯಾರ್ಥಿಗಳಿಗೆ ತಿನ್ನಲು ವಿತರಣೆ ಮಾಡಲಾಗಿದೆ.

ಅದೇ ರೀತಿ ಹಲಸಿನ ಹಣ್ಣನ್ನು ಕೂಡ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಮತ್ತೆ ಈ ಬಾರಿ ಸಪೋಟ, ತೆಂಗು, ಮಾವು, ನಿಂಬೆ, ನೆಲ್ಲಿ ಸಸಿಗಳನ್ನು ಅರಣ್ಯ ಇಲಾಖೆಯವರ ಸಹಯೋಗದೊಂದಿಗೆ ಬೆಳೆಸಲು ತೀರ್ಮಾನಿಸಲಾಗಿದೆ.

ಮಕ್ಕಳು ಪರಿಸರದ ಬಗ್ಗೆ ಕಾಳಜಿ ವಹಿಸುವುದು ಹೇಗೆ ಎಂಬುದನ್ನು ಪ್ರಾತ್ಯಕ್ಷಿತೆಯ ಮೂಲಕ ತೋರಿಸಲಾಗುತ್ತದೆ. ಈ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆಲ್ಲಾ ಪ್ರಾಂಶುಪಾಲ ಹಾಗೂ ಸಿಬ್ಬಂದಿ ಸಹಕಾರವೇ ಕಾರಣವಾಗಿದೆ. ಒಟ್ಟಾರೆ ಹಲವಾರು ಜಾತಿಯ ಸಸಿಗಳನ್ನು ಬೆಳೆಸಿ ವಿದ್ಯಾಲಯದಲ್ಲಿ ಉತ್ತಮ ಪರಿಸರವನ್ನು ರೂಪಿಸಲಾಗಿದೆ ಎನ್ನುತ್ತಾರೆ ವಿಜ್ಞಾನ ಶಿಕ್ಷಕ ಎ.ರವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.