ADVERTISEMENT

ಫಲ ನೀಡದ ರೈತರ ಮನವೊಲಿಕೆ ಯತ್ನ

ನಾಲೆ ಒಡೆದು ನೀರು ಹರಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 5:28 IST
Last Updated 11 ಮಾರ್ಚ್ 2014, 5:28 IST

ಮಲೇಬೆನ್ನೂರು: ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ವಿಭಾಗೀಯ ಕಚೇರಿ ಆವರಣದಲ್ಲಿ ಸಮೀಪದ ಹೊನ್ನಾಳಿ ತಾಲ್ಲೂಕಿನ  ಮುಕ್ತೇನಹಳ್ಳಿ, ಕೆಂಗಲಹಳ್ಳಿ ಹಾಗೂ ತಿಮ್ಮೇನಹಳ್ಳಿಯ 4ನೇ ಉಪಕಾಲುವೆ 9ನೇ ಮೈನರ್‌ ಭಾಗದ ರೈತರು ಅನಧಿಕೃತ ಅಚ್ಚುಕಟ್ಟಿಗೆ ನಾಲೆ ಒಡೆದು ನೀರು ಹರಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅನಿರ್ದಿಷ್ಟ ಕಾಲದ ಪ್ರತಿಭಟನೆ ಸೋಮವಾರ ಮುಂದುವರೆದಿದೆ.

ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಎಂಜಿನಿಯರ್ ಮಹೇಶ್ವರಪ್ಪ, ಬಸವಾಪಟ್ಟಣ ಉಪವಿಭಾಗದ ಎಇಇ ಮಲ್ಲಿಕಾರ್ಜುನ  ಹಾಗೂ ಪೊಲೀಸರು ಧರಣಿ ನಿರತರ ಮನವೊಲಿಕೆಗೆ ಯತ್ನಿಸಿದರು.

ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ ಭಾನುವಾರ ದೂರು ನೀಡಲಾಗಿದೆ. ಧರಣಿ, ಪ್ರತಿಭಟನೆ ಬೇಡ ಎಂಬ ಎಂಜಿನಿಯರ್‌ಗಳ ಹೇಳಿಕೆಗೆ, ‘ನಿಮ್ಮ ಮಾತಿನಲ್ಲಿ ನಮಗೆ ನಂಬಿಕೆ ಇಲ್ಲ. ಪ್ರತಿಭಟನೆ ಆರಂಭವಾದ ನಂತರ ಪೊಲೀಸ್‌ ಭದ್ರತೆಯಲ್ಲಿ ಭಾನುವಾರ  ನಾಲೆ ಮುಚ್ಚಿ ಬಂದಿದ್ದರೂ ಸಂಜೆ ಒಡೆದುಹಾಕಿ ಅಕ್ರಮ ಅಚ್ಚುಕಟ್ಟಿಗೆ ನೀರನ್ನು ಯಥೇಚ್ಛವಾಗಿ ಹರಿಸಿದ್ದಾರೆ. ನಾಲೆ ಸಂಪೂರ್ಣ ದುರಸ್ತಿಯಾಗಬೇಕು. ನಾಲೆಯ
ಆ ಭಾಗಕ್ಕೆ 144ನೇ ಸೆಕ್ಷನ್‌  ಜಾರಿ  ಮಾಡಬೇಕು. ನಾಲೆ ಒಡೆದ 58 ಜನ ರೈತರನ್ನು ಬಂಧಿಸಿ
ಕ್ರಮ ಕೈಗೊಳ್ಳುವವರೆಗೂ ಧರಣಿ ಹಿಂಪಡೆಯುವುದಿಲ್ಲ’ ಎಂದು ಪ್ರತಿಭಟನಾನಿರತ ಹನುಮಂತಪ್ಪ ಹೇಳಿದರು.

‘ನಮ್ಮ ಪ್ರತಿಭಟನೆಗೂ ಚುನಾವಣೆ ನೀತಿ ಸಂಹಿತೆಗೂ ಯಾವುದೇ ಸಂಬಂಧ ಇಲ್ಲ. ಏನೂ ಬೇಕಾದ್ರೂ ಕ್ರಮ ತೆಗೆದುಕೊಳ್ಳಿ. ನಮ್ಮ ಪ್ರತಿಭಟನೆ ಶಾಂತಿಯುತವಾಗಿ ಮುಂದುವರಿಯಲಿದೆ. ಸಮಸ್ಯೆ ಪರಿಹಾರವಾಗ ದಿದ್ದಲ್ಲಿ ಉಪವಾಸ ಸತ್ಯಾಗ್ರಹ ಅನಿವಾರ್ಯ’ ಎಂದು ಅವರು ಎಚ್ಚರಿಕೆ ನೀಡಿದರು.

ಎನ್‌.ಜಿ.ಮರುಳಸಿದ್ದಪ್ಪ, ಟಿ.ಆರ್‌. ಹನುಮಂತಪ್ಪ, ವಿಜಯ್‌ಕುಮಾರ್‌, ಟಿ.ಎನ್‌.ಮಂಜುನಾಥ್‌, ಕೆ.ಎಂ.ಚಂದ್ರಶೇಖರ್‌, ಟಿ.ಯೋಗೇಶ್‌, ಎಸ್‌.ಶಿವಯೋಗಿ, ಕೆ.ಜೆ.ನಾಗರಾಜ್‌, ಅಣ್ಣಪ್ಪ, ವಿಜಯ್‌, ಚಂದ್ರಪ್ಪ, ಬಸವರಾಜ್‌, ಖಲೀಲ್‌, ಯೋಗೀಶ್‌, ಶಿವರಾಜ್‌, ನಾಗಪ್ಪ, ಮಹಂತೇಶ್‌ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.