ADVERTISEMENT

ಬಗೆಹರಿಯದ ಸಿಲಿಂಡರ್ ಸಮಸ್ಯೆ, ವಾಗ್ವಾದ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 8:25 IST
Last Updated 8 ಜೂನ್ 2011, 8:25 IST

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯ ಇಂಡೇನ್ ಅಡುಗೆಅನಿಲ ಸಿಲಿಂಡರ್ ಸಮರ್ಪಕ ವಿತರಣೆ ಮಾಡುತ್ತಿಲ್ಲ ಎಂದು ಹೊಸಂಗಡಿ ಅಡುಗೆಅನಿಲ ವಿತರಣಾ ಕೇಂದ್ರದ ಸಿಬ್ಬಂದಿಯೊಂದಿಗೆ ಗ್ರಾಹಕರು ಮಂಗಳವಾರ ವಾಗ್ವಾದ ನಡೆಸಿದರು.

ಖಾಲಿ ಸಿಲಿಂಡರ್ ನೀಡಿ ಬಿಲ್ ಹಾಕಿಸಿ ಕಾದು ಬೇಸರವಾಗಿದೆ. ಜೇಷ್ಠತೆ ಪಟ್ಟಿ ಪ್ರಕಾರ ಕ್ರಮಬದ್ಧವಾಗಿ ವಿತರಣೆ ಮಾಡುತ್ತಿಲ್ಲ.

ಸಮಸ್ಯೆ ಉಲ್ಬಣಿಸಿದಾಗ ಮಾತ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಮಾಧಾನಪಡಿಸಿ ಹೋಗುತ್ತಾರೆ. ಸುತ್ತಮುತ್ತಲ ನ್ಯಾಮತಿ, ಸಾಸ್ವೆಹಳ್ಳಿ, ಕುಂದೂರು, ಸುರಹೊನ್ನೆ ಮೊದಲಾದ ಕಡೆ ವಿತರಕರು ಬುಕ್ ಮಾಡಿರುವ ಗ್ರಾಹಕರ ಮನೆ ಬಾಗಿಲಿಗೆ ಬಂದು ಹಣ ಪಡೆದು ಖಾಲಿ ಸಿಲಿಂಡರ್ ಪಡೆದು ತುಂಬಿದ ಸಿಲಿಂಡರ್ ಕೊಟ್ಟು ಹೋಗುತ್ತಾರೆ. ಆದರೆ, ಇಲ್ಲಿ ಬುಕ್ಕಿಂಗ್ ಮಾಡಲು, ಹಣ ನೀಡಿ ಖಾಲಿ ಸಿಲಿಂಡರ್ ವಿನಿಮಯಕ್ಕೆ ವಾರಗಟ್ಟಲೆ ಕಾಯಬೇಕು ಎಂದು ಗ್ರಾಹಕರು ದೂರಿದರು.

ಇಷ್ಟೆಲ್ಲ ಸಮಸ್ಯೆ ಗಲಾಟೆ ಆಗಿದ್ದು,  ಮಾಧ್ಯಮಗಳಲ್ಲಿ  ವರದಿಯಾದರೂ ನಮಗೆ ಯಾವುದೇ ದೂರು ಬಂದಿಲ್ಲ. ಹಾಗಾಗಿ ದಂಡ ವಿಧಿಸಲು ಅಸಾಧ್ಯ ಎಂದು ಆಹಾರ  ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

ಸಮಸ್ಯೆ ಕುರಿತು ತಹಶೀಲ್ದಾರ್ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ಅವರಿಗೆ ದೂರವಾಣಿ ಮೂಲಕ ದೂರು ನೀಡಲು ಗ್ರಾಹಕ ಡಾ.ಚಂದ್ರಕಾಂತ್ ಗುಜ್ಜರ್ ವಿಫಲ ಯತ್ನ ನಡೆಸಿದರು. 

ಕೊನೆಗೆ ಶುಕ್ರವಾರದ ಒಳಗೆ ಸಿಲಿಂಡರ್ ವಿತರಿಸುವುದಾಗಿ ವಿತರಕರು ಭರವಸೆ ನೀಡಿದರು. ಆಶ್ವಾಸನೆಯಂತೆ ವಿತರಣೆಗೆ ಕ್ರಮ ಕೈಗೊಳ್ಳದಿದ್ದಲ್ಲಿ  ಮುಂದೆ ಆಗುವ ಅನಾಹುತಗಳಿಗೆ ವಿತರಕರೇ ಹೊಣೆಯಾಗುತ್ತಾರೆ ಎಂದು ಗ್ರಾಹಕರೂ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.