ADVERTISEMENT

ಬದಲಾವಣೆಗಾಗಿ ಕಾಂಗ್ರೆಸ್ ಜತೆ ಬನ್ನಿ: ಎಸ್‌ಎಸ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 4:20 IST
Last Updated 4 ಅಕ್ಟೋಬರ್ 2012, 4:20 IST

ದಾವಣಗೆರೆ: ಬಿಜೆಪಿ ಸರ್ಕಾರ ಹೊಡೆದೋಡಿಸಿ ಆಡಳಿತದಲ್ಲಿ ಬದಲಾವಣೆ ತರಲು ಜನರು ಕಾಂಗ್ರೆಸ್ ಜತೆ ಬರಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.

ನಗರದ ಮಹಾನಗರ ಪಾಲಿಕೆ ಆವರಣದ ಪುಟ್ಟಣ್ಣ ಕಣಗಾಲ್ ವಾದ್ಯಮಂಟಪದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ `ಕಾಂಗ್ರೆಸ್ಸಿನೊಂದಿಗೆ ಬನ್ನಿ, ಬದಲಾವಣೆ ತನ್ನಿ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯನ್ನು ಕೊಂದ ಸರ್ಕಾರ ರಾಜ್ಯದಲ್ಲಿದೆ. ಅಂಥ ಸರ್ಕಾರ ಹೊಡೆದೋಡಿಸಲು ಮತದಾರರು ಕಾಂಗ್ರೆಸ್ಸಿನೊಂದಿಗೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು. ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಅಂಥವರ ಪ್ರಾಮಾಣಿಕತೆ ಶೇ 10ರಷ್ಟನ್ನಾದರೂ ಇಂದು ಬಿಜೆಪಿ ಮೈಗೂಡಿಸಿಕೊಂಡಿದ್ದರೆ ಭ್ರಷ್ಟಾಚಾರ ನಡೆಯುತ್ತಿರಲಿಲ್ಲ. ಇದಕ್ಕೆಲ್ಲಾ ಮುಕ್ತಿ ಹಾಡಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಆಶಿಸಿದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ ಮಾತನಾಡಿ, ಜನರ ಮನವನ್ನು ಹೃದಯದಿಂದ ತಟ್ಟಬೇಕೇ ವಿನಾಃ ಬುದ್ಧಿಯಿಂದಲ್ಲ. ಕಾಂಗ್ರೆಸ್ ಜನರನ್ನು ಹೃದಯದಿಂದ ತಟ್ಟಬಲ್ಲ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಬಿಜೆಪಿ ಸರ್ಕಾರ ಕನಿಷ್ಠ ವಿಧವಾ ವೇತನ, ವೃದ್ಧಾಪ್ಯ ವೇತವನ್ನೂ ಸಮರ್ಪಕವಾಗಿ ಒದಗಿಸುವಲ್ಲಿ ವಿಫಲವಾಗಿದೆ. ಅಂಥ ಸರ್ಕಾರವನ್ನು ಕಿತ್ತೊಗೆಯಲು ಮಹಾತ್ಮ ಗಾಂಧಿ ಜನಿಸಿದ ಈ ದಿನ `ಕಾಂಗ್ರೆಸ್ಸಿನೊಂದಿಗೆ ಬನ್ನಿ, ಬದಲಾವಣೆ ತನ್ನಿ~ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇದು ನಿಜಕ್ಕೂ ಅರ್ಥಪೂರ್ಣ ಎಂದು ಬಣ್ಣಿಸಿದರು.

ಕಾಂಗ್ರೆಸ್ ಮುಖಂಡರಾದ ಡಿ. ಬಸವರಾಜ, ಸೈಯ್ಯದ್ ಸೈಫುಲ್ಲಾ, ಎ. ನಾಗರಾಜ, ದಿನೇಶ್ ಕೆ. ಶೆಟ್ಟಿ, ನಲ್ಕುಂದ ಹಾಲೇಶ್, ಮಹಾದೇವಮ್ಮ, ಸೀಮೆಎಣ್ಣೆ ಮಲ್ಲೇಶ್, ಕೋಳಿ ಇಬ್ರಾಹಿಂ, ಸೋಮ್ಲಾಪುರದ ಹನುಮಂತಪ್ಪ ಮತ್ತು ಇತರ ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.