ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲ ಎಂಬ ಹತಾಶೆ ಬೇಡ. ಮುಂದಿನ ಕಾಲಚಕ್ರದಲ್ಲಿ ಬಿಜೆಪಿಗೆ ಅಧಿಕಾರ ಸಿಗಲಿದೆ ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಕಾರ್ಯಕರ್ತರಿಗೆ ಸಮಾಧಾನ ಹೇಳಿದರು.
ನಗರದ ಸರ್ಕಾರಿ ಅಂಧ ಹೆಣ್ಣುಮಕ್ಕಳ ವಸತಿಯುತ ಶಾಲೆಯಲ್ಲಿ ಶುಕ್ರವಾರ ಸಿದ್ದೇಶ್ವರ ಅವರ ಅಭಿಮಾನಿ ಗಳ ಬಳಗದಿಂದ ಹಮ್ಮಿಕೊಂಡಿದ್ದ 61ನೇ ಹುಟ್ಟುಹಬ್ಬದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ. ನಾನು ಕೆಲಸ ಮಾಡಿಸಿಕೊಂಡು ಬರುವಷ್ಟು ಪ್ರೀತಿ, ವಿಶ್ವಾಸ ಗಳಿಸಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆಗೂ ಯಾವ ಗ್ರಾಮಗಳಿಗೆ ಸೌಲಭ್ಯ ಸಿಕ್ಕಲ್ಲ ಅಂತಹ ಗ್ರಾಮಗಳ ಮುಖಂಡರು ಸೌಲಭ್ಯಕ್ಕಾಗಿ ಮುಂದೆ ಬಂದರೆ, ಪ್ರಾಮಾಣಿಕವಾಗಿ ಸೌಕರ್ಯ ಕಲ್ಪಿಸಿಕೊಡುತ್ತೇನೆ. ಅದನ್ನು ಹೊರತುಪಡಿಸಿ ಕಾಮಗಾರಿ ಗುತ್ತಿಗೆ ಕೇಳಿದರೆ ನೀಜಕ್ಕೂ ನಾನು ಕೊಡುವುದಿಲ್ಲ. ಇದರಿಂದ ಯಾರೂ ಬೇಕಾದರೂ ಬೇಸರಪಟ್ಟುಕೊಂಡರೂ ಸರಿ, ಗುತ್ತಿಗೆ ನೀಡುವ ವಿಚಾರದಲ್ಲಿ ರಾಜಿ ಇಲ್ಲ ಎಂದರು.
ಗ್ರಾಮೀಣ ಪ್ರದೇಶದಿಂದ ಬಂದ ನಾನು ಎಂದೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಪ್ರೌಢಾವಸ್ಥೆಗೆ ಬಂದ ಮೇಲೂ ಹುಟ್ಟುಹಬ್ಬ ಆಚರಿಸಿಕೊಳ್ಳುವ ಬಯಕೆ ಆಗಲಿಲ್ಲ. ಲೋಕಸಭಾ ಸದಸ್ಯ ಸ್ಥಾನ ಪಡೆದ ಮೇಲೂ ಇಂತಹ ಅಭಿಲಾಷೆ ಹುಟ್ಟಲಿಲ್ಲ. ಸರಳ ಬದುಕು ನನಗಿಷ್ಟ. ಹಾಗಾಗಿ, ಇಲ್ಲಿಯವರೆಗೆ ಸರಳ ಜೀವನ ಸವೆಸಿಕೊಂಡು ಬಂದಿದ್ದೇನೆ. ಈಗ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಅಂಧ ಮಕ್ಕಳ ಮಧ್ಯೆ ಹುಟ್ಟುಹಬ್ಬ ಆಚರಣೆ ಹಮ್ಮಿಕೊಳ್ಳುತ್ತಾ ಬಂದಿದ್ದೇನೆ. ಇದು ನನಗೆ ಸಂತಸ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಅಂಧ ಹೆಣ್ಣು ಮಕ್ಕಳಿಗೆ ಬಟ್ಟೆ ವಿತರಿಸಲಾಯಿತು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶೀಲಾ ಗದ್ದಿಗೇಶ್, ಜಿ.ಪಂ. ಸದಸ್ಯರಾದ ಎಚ್. ನಾಗರಾಜ್, ಯಶೋಧಾ ಉಮೇಶ್ನಾಯ್ಕ, ಕೊಂಡಜ್ಜಿ ಜಯಪ್ರಕಾಶ್ ಉಪಸ್ಥಿತರಿದ್ದರು.
ಪಂಚಾಕ್ಷರ ಗವಾಯಿ ಅಂಧರ ಶಿಕ್ಷಣ ಸಮಿತಿಗೆ ಭೇಟಿ: ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ ತಮ್ಮ 61ನೇ ಹುಟ್ಟುಹಬ್ಬವನ್ನು ದಾವಣಗೆರೆಯ ಪಂಚಾಕ್ಷರ ಗವಾಯಿ ಅಂಧರ ಶಿಕ್ಷಣ ಸಮಿತಿಯಲ್ಲಿ ಅಂಧ ಮಕ್ಕಳೊಂದಿಗೆ ಆಚರಿಸಿಕೊಂಡರು.
ಪತ್ನಿ ಸಮೇತರಾಗಿ ಆಗಮಿಸಿದ್ದ ಸಿದ್ದೇಶ್ವರ, ಪಂಚಾಕ್ಷರ ಗವಾಯಿಗಳ ಗದ್ದುಗೆ ದರ್ಶನ ಪಡೆದರು. ಬಳಿಕ ಅಂಧ ಮಕ್ಕಳ ಗಾಯನ ಆಲಿಸಿ, ಹಾಲು, ಹಣ್ಣು, ಶಾಲು ವಿತರಣೆ ಮಾಡಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.