ADVERTISEMENT

ಬೆನಕೇಶ್ವರ ಸ್ವಾಮಿ ತಿರುಗುಣಿ ರಥೋತ್ಸವ

ಬೆನಕನಹಳ್ಳಿ: ಒಣ ಕೊಬ್ಬರಿ ಸುಟ್ಟು ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 5:31 IST
Last Updated 19 ಮಾರ್ಚ್ 2014, 5:31 IST

ಹೊನ್ನಾಳಿ: ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ‘ಬೆನಕೇಶ್ವರ ಸ್ವಾಮಿ ತಿರುಗುಣಿ ರಥೋತ್ಸವ’ ಮಂಗಳವಾರ ಬೆಳಿಗ್ಗೆ ಸಹಸ್ರಾರು ಭಕ್ತರ
ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ತಿರುಗುಣಿ ರಥೋತ್ಸವ: ರಾಜ್ಯದಲ್ಲಿ ಎರಡು ಸ್ಥಳಗಳಲ್ಲಿ ಮಾತ್ರ ವಿಶಿಷ್ಟವಾದ ತಿರುಗುಣಿ ರಥೋತ್ಸವ ಜರುಗುತ್ತದೆ. ಮೊದಲನೇ ಸ್ಥಳ ಸುಳ್ಯ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ. ಎರಡನೇಯದು ಹೊನ್ನಾಳಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ‘ಬೆನಕೇಶ್ವರ ಸ್ವಾಮಿ ತಿರುಗುಣಿ ರಥೋತ್ಸವ’. ಇದರ ವಿಶೇಷ ಏನೆಂದರೆ, ರಥವು ಗಡ್ಡೆಯ ಭಾಗ ಹಾಗೂ ಮೇಲ್ಭಾಗ ಎಂಬುದಾಗಿ ಎರಡು ಭಾಗಗಳಾಗಿ ವಿಭಾಗಿಸ ಲಾಗಿರುತ್ತದೆ. ರಥ ಚಲಿಸಿದಂತೆ ರಥದ ಗಡ್ಡೆಯ ಮೇಲ್ಭಾಗ ತಿರುತ್ತದೆ. ಇದು ನಯನಮನೋಹರವಾದ ದೃಶ್ಯ. ಇದನ್ನು ವೀಕ್ಷಿಸಲೆಂದೇ ಭಕ್ತ ಸಮೂಹ ಆಗಮಿಸುತ್ತದೆ. ಇಂದಿನ ಆಧುನಿಕ ಹಾಗೂ ಯಾಂತ್ರಿಕ ಯುಗದಲ್ಲಿ ಇಂತಹ ವಿಶಿಷ್ಟ ರಥೋತ್ಸವ ನಡೆದುಕೊಂಡು ಬರುತ್ತಿರುವುದು ಈ ಭಾಗದ ಭಕ್ತರಲ್ಲಿ ಹರ್ಷ ಮೂಡಿಸಿದೆ.

ಚಿಕ್ಕಬಾಸೂರಿನ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿ ಸೇರಿದಂತೆ ವಿವಿಧ ಗ್ರಾಮಗಳ ದೇವತಾ ಉತ್ಸವ ಮೂರ್ತಿ ರಥೋತ್ಸವಕ್ಕೆ ಆಗಮಿಸಿದ್ದವು.

ಮಂಗಳವಾರ ಬೆಳಿಗ್ಗೆ ರಾಜಬೀದಿಯಲ್ಲಿ ರಥ ಸಾಗಿದಂತೆ ಭಕ್ತರು ಹರಕೆ, ಕಾಣಿಕೆ ಸಮರ್ಪಿಸಿ ದರು. ಒಣ ಕೊಬ್ಬರಿ ಸುಡುವ ದೃಶ್ಯ ಕಂಡು ಬಂತು. ರಥಕ್ಕೆ ಭಕ್ತರು ಮೆಣಸಿನಕಾಳು, ಮಂಡಕ್ಕಿ, ಬಾಳೆಹಣ್ಣು ಅರ್ಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಮತ್ತು ಬಳ್ಳಾರಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ರಥೋತ್ಸವಕ್ಕೆ ನಾಲ್ಕು ದಿನಗಳಿಂದ ತಯಾರಿ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.