ADVERTISEMENT

ಬೆಲೆ ಕುಸಿತ: ಹೈರಾಣಾದ ಈರುಳ್ಳಿ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 4:50 IST
Last Updated 24 ಜನವರಿ 2012, 4:50 IST

ಜಗಳೂರು: ಕಳೆದ ಹತ್ತು ವರ್ಷಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು, ತಾಲ್ಲೂಕಿನ ಈರುಳ್ಳಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಂಗಾರು ಹಾಗೂ ಹಿಂಗಾರು ಮಳೆಯ ವೈಫಲ್ಯದ ನಡುವೆಯೂ ಕಷ್ಟಪಟ್ಟು ಬೆಳೆದ ಈರುಳ್ಳಿಯನ್ನು ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಈರುಳ್ಳಿಯನ್ನು ತಾಲ್ಲೂಕಿನಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.  ಇಲ್ಲಿನ ಫಲವತ್ತಾದ ಕಪ್ಪುಭೂಮಿಯಲ್ಲಿ ಬೆಳೆಯವ ಉತ್ತಮ ಗುಣಮಟ್ಟದ ಈರುಳ್ಳಿಗೆ ಬೆಂಗಳೂರು, ಕೊಲ್ಕತ್ತಾ ಮುಂತಾದ ಮಾರುಕಟ್ಟೆಗಳಲ್ಲಿ ಪ್ರತಿವರ್ಷ ಹೆಚ್ಚಿನ ಬೇಡಿಕೆ ಸಿಗುತ್ತಿತ್ತು. ಆದರೆ,  ಈ ವರ್ಷ ಈರುಳ್ಳಿಯನ್ನು ಕೇಳುವವರೇ ಇಲ್ಲದಂತಾಗಿದ್ದು, ಹೊಲಗಳಲ್ಲೇ ಕೊಳೆಯುತ್ತಿದೆ.

ಮಾರುಕಟ್ಟೆಯಲ್ಲಿ ಪ್ರಸ್ತುತ ಪ್ರತಿ ಕ್ವಿಂಟಲ್‌ಗೆ ಕೇವಲ ್ಙ 100ರಿಂದ 400ರವರೆಗೆ ಬೆಲೆ ಇದೆ.  ಸಾಗಣೆ ವೆಚ್ಚ, ಖಾಲಿ ಚೀಲ, ಕಟಾವು ಕೂಲಿ ಸೇರಿದಂತೆ  ಮಾರುಕಟ್ಟೆಗೆ ಸಾಗಿಸಲು ಪ್ರತಿ 50 ಕೆ.ಜಿ. ಪಾಕೆಟ್‌ಗೆ ಕನಿಷ್ಟ ್ಙ 120 ಖರ್ಚು ಬರುತ್ತಿದೆ. ಅಂದರೆ ಮಾರಾಟದಿಂದ ಬರುವ ಹಣಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಹಾಗಾಗಿ, ಬೆಳೆದ ಬೆಳೆಯನ್ನು ಮನೆಯಲ್ಲಿಟ್ಟುಕೊಳ್ಳಲಾಗದ ರೈತರು ಮಾರುಕಟ್ಟೆಗೆ ಕೊಂಡೊಯ್ದು ಕೈಸುಟ್ಟುಕೊಂಡಿದ್ದಾರೆ.

`ಈರುಳ್ಳಿ ಬೆಳೆದಿದ್ದೇವೆ ಎಂದು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಲಾರಿ ಬಾಡಿಗೆಗೂ ಸಾಲುವುದಿಲ್ಲ. ಈಗಾಗಲೇ ಬೀಜ, ಗೊಬ್ಬರ ಅಂತಾ ಸಾಲ ಮಾಡಿದ್ದೇವೆ. ಮತ್ತೆ ಈಗ ನಷ್ಟ ಮಾಡಿಕೊಳ್ಳುವುದು ಬೇಡ. ಈರುಳ್ಳಿಯನ್ನು ಹೊಲದಲ್ಲೇ ಮುಚ್ಚಿಹಾಕಿದರೆ ಗೊಬ್ಬರವಾದರೂ ಆಗುತ್ತೆ~ ಎಂದು ಸಮೀಪದ ಗೊಲ್ಲರಹಟ್ಟಿಯ ರೈತ ಗೋಪಾಲಪ್ಪ `ಪ್ರಜಾವಾಣಿ~ಯೊಂದಿಗೆ  ನೊಂದು ನುಡಿದರು.

`್ಙ 3 ಲಕ್ಷ ಖರ್ಚು ಮಾಡಿ ಹತ್ತು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೇವೆ. ಆದರೆ, ಬೆಲೆ ಇಲ್ಲದ ಕಾರಣ  ಮಾರಾಟದಿಂದ ಕೇವಲ ್ಙ 1 ಲಕ್ಷ ಬಂದಿದ್ದು, ್ಙ 2ಲಕ್ಷ ಸಾಲ  ಮೈಮೇಲೆ ಬಂದಿದೆ~ ಎಂದು ತಾಲ್ಲೂಕಿನ ಭರಮಸಮುದ್ರ ಗ್ರಾಮದ ರೈತ ಕುಬೇರಪ್ಪ  ತಮ್ಮ ನೋವು ತೋಡಿಕೊಂಡರು.

ಬೆಂಬಲ ಬೆಲೆ ಯೋಜನೆಯಡಿ ಈರುಳ್ಳಿಯನ್ನು ಖರೀದಿಸುವಂತೆ ಸರ್ಕಾರ ಆದೇಶಿಸಿದೆ. ಆದರೆ, ಜಿಲ್ಲಾಡಳಿತದ ನಿರಾಸಕ್ತಿಯಿಂದಾಗಿ ಖರೀದಿ ಕೆಂದ್ರ ತೆರೆಯದೇ ರೈತರು ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ರೈತ ಸಂಘಟನೆಗಳು, ಈರುಳ್ಳಿ ಬೆಳೆಗಾರರು ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಈ ಭಾಗದ ಈರುಳ್ಳಿ ಬೆಳೆಗಾರರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.