ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ: ಬೀದಿನಾಟಕ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 7:55 IST
Last Updated 18 ಅಕ್ಟೋಬರ್ 2012, 7:55 IST
ಮತದಾರರ ಪಟ್ಟಿ ಪರಿಷ್ಕರಣೆ: ಬೀದಿನಾಟಕ
ಮತದಾರರ ಪಟ್ಟಿ ಪರಿಷ್ಕರಣೆ: ಬೀದಿನಾಟಕ   

ಹೊನ್ನಾಳಿ: ಎಲ್ಲರೂ ಮತದಾರರ ಗುರುತಿನಪತ್ರ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ಹೇಳಿದರು. ಪಟ್ಟಣ ಪಂಚಾಯ್ತಿ ಆವರಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಜಾಗೃತಿ ಮೂಡಿಸುವ ಬೀದಿನಾಟಕ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಮತದಾನ ಒಂದು ಪವಿತ್ರ ಪ್ರಕ್ರಿಯೆ. ಇದರಲ್ಲಿ ಎಲ್ಲ ಅರ್ಹರೂ ಪಾಲ್ಗೊಳ್ಳಬೇಕು. 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಗುರುತಿನ ಪತ್ರ ಪಡೆದುಕೊಳ್ಳಬೇಕು. ಪಟ್ಟಿಯಲ್ಲಿ ಹೆಸರು ಇರುವವರು ತಮ್ಮ ಹೆಸರನ್ನು ಪರಿಶೀಲಿಸಿಬೇಕು.
 
ಒಂದು ವೇಳೆ ಬಿಟ್ಟು ಹೋಗಿದ್ದರೆ ಸೇರ್ಪಡೆಗೊಳಿಸಬೇಕು. ದೋಷ ಇದ್ದರೆ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಅ. 31ರವರೆಗೆ ಪರಿಷ್ಕರಣೆಗೆ ಅವಕಾಶ ಇದೆ ಎಂದು ಅವರು ವಿವರಿಸಿದರು. ತಾಲ್ಲೂಕು ಪಂಚಾಯ್ತಿ ಇಒ ಎಚ್. ಹುಲಿರಾಜ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ . ಮಂಜುನಾಥ್, ಯೋಜನಾಧಿಕಾರಿ ಎಸ್.ಆರ್. ವೀರಭದ್ರಯ್ಯ, ಕಂದಾಯ ಅಧಿಕಾರಿ ವಸಂತ್ ಇದ್ದರು.ಡಯೆಟ್ ಕಲಾವಿದರು ಬೀದಿನಾಟಕ ಅಭಿನಯಿಸಿದರು.

ಅಂತರ ವಿವಿಮಟ್ಟಕ್ಕೆ ಆಯ್ಕೆ
ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಎರಡು ಸ್ವರ್ಣ, ಒಂದು ರಜತ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದು, ಅಂತರ ವಿಶ್ವವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಬಿಎ ಕಲಾ ವಿಭಾಗದ ಡಿ. ರಾಜಾಸಾಬ್ ಪ್ರಥಮ. ದ್ವಿತೀಯ ಬಿಎ ಕಲಾ ವಿಭಾಗದ ಎಸ್. ಮಂಜುನಾಥ್ ತೃತೀಯ. ಹೈಜಂಪ್‌ನಲ್ಲಿ ದ್ವಿತೀಯ ಬಿಎ ಕಲಾ ವಿಭಾಗದ ಆರ್.ಜೆ. ಹನುಮಂತ ಪ್ರಥಮ. 800 ಮೀ. ಓಟದಲ್ಲಿ ಪ್ರಥಮ ಬಿಬಿಎಂ ವಿದ್ಯಾರ್ಥಿನಿ ಜೆ.ಎಲ್. ರಮ್ಯಾ ದ್ವಿತೀಯ. ಜಾವೆಲಿನ್ ಎಸೆತದಲ್ಲಿ ಅಂತಿಮ ಬಿಬಿಎಂ ವಿದ್ಯಾರ್ಥಿನಿ ಬಿ.ಜೆ. ಶೃತಿ ದ್ವಿತೀಯ. ಪ್ರಥಮ ಬಿಬಿಎಂ ವಿದ್ಯಾರ್ಥಿನಿ ಸುಮಾ ಬಿ. ಉಕ್ಕಡಗಾತ್ರಿ ತೃತೀಯ ಸ್ಥಾನ ಗಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಡಾ.ಬಿ.ಜಿ. ಚನ್ನೇಶ್, ದೈಹಿಕ ಶಿಕ್ಷಣ ನಿರ್ದೇಶಕ ಪಿ.ಎಸ್. ಹರೀಶ್, ಡಿ.ಸಿ. ಪಾಟೀಲ್ ಅಭಿನಂದಿಸಿದ್ದಾರೆ. ಅಂತರ ವಿಶ್ವವಿದ್ಯಾನಿಲಯ ಮಟ್ಟದಲ್ಲೂ ಉತ್ತಮ ಸಾಧನೆ ಮಾಡಿ ಹೆಚ್ಚಿನ ಪದಕಗಳನ್ನು ಗೆಲ್ಲಲಿ ಎಂದು ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.