ADVERTISEMENT

ಮಳೆ; ನೆಲಕಚ್ಚಿದ ತರಕಾರಿ ಬೆಳೆ-ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 10:04 IST
Last Updated 8 ಜೂನ್ 2013, 10:04 IST

ದಾವಣಗೆರೆ: ನಗರದಲ್ಲಿ ತರಕಾರಿ ಬೆಲೆಯು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜಿಲ್ಲೆಯ ಸುತ್ತಮುತ್ತಲಿನ ತಾಲ್ಲೂಕು ಕೇಂದ್ರ ಮತ್ತು ಗ್ರಾಮಗಳಲ್ಲಿ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. 

ಇದರಿಂದಾಗಿ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣ ತುಂಬಾ ಕಡಿಮೆಯಾಗಿದೆ. ಜೊತೆಗೆ ಮದುವೆ ಸೀಸನ್ ಇದ್ದ ಕಾರಣ ತರಕಾರಿಗಳ ಬೆಲೆಯಲ್ಲಿ ಏರಿಕೆ ಆಗಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಕೆಜಿ ತೂಕದಲ್ಲಿ ತರಕಾರಿಯನ್ನು ಖರೀದಿಸುತ್ತಿದ್ದ ಜನರು ಇಂದು ಅರ್ಧ ಕೆಜಿ ತೂಕದಲ್ಲಿ ತರಕಾರಿ ಕೊಳ್ಳುತ್ತಿದ್ದಾರೆ. ಯಾವುದೇ ತರಕಾರಿ ದರ ಕೇಳಿದರೂ ರೂ30ರಿಂದ 60ರವರೆಗೆ ಬೆಲೆ ಇದೆ. ಕೆಲ ದಿನಗಳ ಹಿಂದೆ ಹುರುಳಿಕಾಯಿ ಬೆಲೆ ಕೆಜಿಗೆ ರೂ100ರವರೆಗೂ ಏರಿದ ಉದಾಹರಣೆ ಇದೆ.

ದಿನನಿತ್ಯ ನಗರದ ಎಪಿಎಂಸಿಗೆ ಜಿಲ್ಲೆಯ ಸುತ್ತ ಮುತ್ತಲಿನ ತಾಲ್ಲೂಕು ಮತ್ತು ಗ್ರಾಮಗಳಿಂದ ರಾಶಿ ರಾಶಿ ತರಕಾರಿ ಚೀಲಗಳು/ ತರಕಾರಿ ಬುಟ್ಟಿಗಳು ಬಂದು ಬೀಳುತ್ತಿದ್ದವು. ಆದರೆ, ಇಂದು ಇವುಗಳ ಸಂಖ್ಯೆ ಕಡಿಮೆಯಾಗಿದೆ. `ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದಿದ್ದ ತರಕಾರಿ ಬೆಳೆ ಹಾಳಾಗಿದೆ. ಈಗ ತುಮಕೂರು, ಬೆಂಗಳೂರು ಮತ್ತು ಹಾಸನ ಸೇರಿದಂತೆ ಇತರ ನಗರಗಳಿಂದ ತರಕಾರಿ ಇಲ್ಲಿಗೆ ಬರುತ್ತಿದೆ.

ಸಹಜವಾಗಿಯೇ ತರಕಾರಿ ಬೆಲೆಗಳು ಏರುಮುಖದಲ್ಲಿವೆ. ಸಗಟು ಬೆಲೆಯಲ್ಲಿ ತರಕಾರಿ ಖರೀದಿಸಿದರೆ ಸ್ವಲ್ಪ ಹಣವಾದರೂ ಉಳಿಸಬಹುದು ಎಂದು ಭಾವಿಸಿ, ಚಿಲ್ಲರೆ ದರದಲ್ಲಿ ಖರೀದಿಸುವವರು ಕೂಡ ಇಂದು ಎಪಿಎಂಸಿಗೆ ಬರುತ್ತಿದ್ದಾರೆ' ಎನ್ನುತ್ತಾರೆ ನಗರದ ಎಪಿಎಂಸಿ ಅಂಗಡಿಯೊಂದರ ಮಾಲೀಕ ಮಂಜುನಾಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT