ADVERTISEMENT

`ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಶ್ರಮಿಸಿ'

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 8:49 IST
Last Updated 14 ಏಪ್ರಿಲ್ 2013, 8:49 IST

ಹೊನ್ನಾಳಿ: ನಿರ್ಭೀತ, ನ್ಯಾಯಸಮ್ಮತ ಮತದಾನದ ವಾತಾವರಣ ನಿರ್ಮಾಣವಾಗಬೇಕು. ಮುಕ್ತ ಚುನಾವಣೆಗೆ ಎಲ್ಲಾ ಅಧಿಕಾರಿಗಳೂ ಶ್ರಮಿಸಬೇಕು ಎಂದು ಜಿಲ್ಲಾ ಚುನಾವಣಾ ವೆಚ್ಚ ಮೇಲುಸ್ತುವಾರಿ ಅಧಿಕಾರಿ ಎ.ಕೆ. ಧೀರ್ ಸೂಚಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಅಭ್ಯರ್ಥಿಗಳು ಮಾಡುವ ಚುನಾವಣಾ ವೆಚ್ಚದ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿರಬೇಕು. ವಿವಿಧ ಚುನಾವಣಾಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಸಮಯಪ್ರಜ್ಞೆ ಮೆರೆಯಬೇಕು. ಅಪರಾಧ ಪ್ರಕರಣಗಳ ವಿರುದ್ಧ ನಿರ್ಭೀತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಚುನಾವಣಾ ಅಧಿಸೂಚನೆ ಪ್ರಕಟಗೊಂಡ ಮೂರೇ ದಿನಗಳಲ್ಲಿ ಹೊನ್ನಾಳಿ ಪೊಲೀಸರು 12 ಪ್ರಕರಣ ದಾಖಲಿಸಿದ್ದಾರೆ. ನಿಷ್ಪಕ್ಷಪಾತ ಕರ್ತವ್ಯ ನಿರ್ವಹಣೆಗೆ ಇದೊಂದು ಮಾದರಿ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಕೆಲಸ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ತಾಲ್ಲೂಕು ಚುನಾವಣಾಧಿಕಾರಿ ಬಿ. ಆನಂದ್ ಮಾತನಾಡಿ, ವಿಧಾನಸಭಾ ಚುನಾವಣೆಯ ವೆಚ್ಚದ ಮಿತಿಯನ್ನು ರೂ. 16 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ. ಒಂದು ವೇಳೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ವ್ಯಕ್ತಿಯ ಚುನಾವಣಾ ವೆಚ್ಚ ರೂ. 16ಲಕ್ಷ ಮೀರಿದ್ದು ಕಂಡುಬಂದರೆ, ಅಂತಹ ವ್ಯಕ್ತಿಯನ್ನು ಅನರ್ಹಗೊಳಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ಆದ್ದರಿಂದ, ಎಲ್ಲಾ ಅಧಿಕಾರಿಗಳು ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.

ಕುಮಾರ್, ಹನುಮಂತಪ್ಪ, ಅಶೋಕ್‌ಕುಮಾರ್, ತ್ಯಾಗರಾಜ್ ಅವರು ಚುನಾವಣಾ ವೆಚ್ಚ ಮೇಲುಸ್ತುವಾರಿ ಅಧಿಕಾರಿ ಎ.ಕೆ. ಧೀರ್ ಅವರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.

ಸಹಾಯಕ ಚುನಾವಣಾಧಿಕಾರಿ ಟಿ.ವಿ. ಪ್ರಕಾಶ್, ನ್ಯಾಮತಿ ಚುನಾವಣಾಧಿಕಾರಿ ಹನುಮಂತರೆಡ್ಡಿ, ಸಿಪಿಐ ಚನ್ನಕೇಶವ ಬಿ. ಟಿಂಕಳೀಕರ್, ಪಿಎಸ್‌ಐ ಬಿ.ಜಿ. ಕುಮಾರಸ್ವಾಮಿ, ಅಬಕಾರಿ ಸಿಪಿಐ ಎಸ್.ಆರ್. ಮುರುಡೇಶ್, ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT