ADVERTISEMENT

ಮೂಲಸೌಲಭ್ಯ ಕೊರತೆಯಲ್ಲಿ ಸ್ಮಶಾನ

ತ್ಯಾವಣಿಗೆ ವೀರಶೈವ ರುದ್ರಭೂಮಿ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 10:29 IST
Last Updated 24 ಏಪ್ರಿಲ್ 2013, 10:29 IST

ತ್ಯಾವಣಿಗೆ:  ಗ್ರಾಮದಲ್ಲಿರು ವೀರಶೈವರ ಸ್ಮಶಾನ, ಆಂಜನೇಯಸ್ವಾಮಿ ಸ್ಮಶಾನ ಹಾಗೂ ಹರಿಜನರ ಸ್ಮಶಾನ ಸ್ಥಳಗಳ್ಲಲಿ ಮೂಲಸೌಲಭ್ಯ ಕೊರತೆಯಿಂದಾಗಿ ನಾಗರಿಕರಿಗೆ ಅಂತ್ಯಸಂಸ್ಕಾರಕ್ಕೆ ತೊಂದರೆ ಉಂಟಾಗಿದೆ.

ಚಿರಡೋಣಿ ರಸ್ತೆಯಲ್ಲಿರುವ ವೀರಶೈವ ಸ್ಮಶಾನ ಸುಮಾರು ಒಂದು ಎಕರೆ ವಿಸ್ತೀರ್ಣ ಹೊಂದಿದ್ದು, ಗೇಟ್‌ನ 2 ಭಾಗಗಳಲ್ಲಿ ಒಂದು ಭಾಗ ಮಾತ್ರ ಇದ್ದು, ಅದೂ ಸಹ ಮುರಿದು ಬಿದ್ದಿದೆ, ಸುತ್ತಲೂ ಕ್ಲ್ಲಲುಕಂಬ ನೆಡಿಸಿ ತಂತಿ ಬೇಲಿ ಹಾಕಿಸಿದ್ದು, ಇಂದು ಹಾಳಾಗಿ ಹೋಗಿ, ಮಲಮೂತ್ರ ಮಾಡಲು ಯೋಗ್ಯವಾದ ಸ್ಥಳವಾಗಿ ಪರಿವರ್ತನೆಯಾಗಿದೆ.

ಸ್ಮಶಾನ ಮುಂದೆ ಗ್ರಾಮದ ತ್ಯಾಜ್ಯ ವಸ್ತುಗಳ ರಾಶಿಗಳು ಬಿದ್ದಿವೆ, ಚರಂಡಿಯನ್ನು ಸ್ವಚ್ಛ ಗೊಳಿಸದಿರುವುದರಿಂದ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ಮುಂದೆ ಹರಿದುಹೋಗಲು ಸಾಧ್ಯವಾಗದೆ ಸ್ಮಶಾನದ ಒಳಗೆ ಹರಿದುಹೋಗಿ ಅಲ್ಲಿಯೇ ನಿಂತು ಕೆಟ್ಟ ವಾಸನೆ ಬೀರುತ್ತಿದೆ. ನೆರಳಿಗೆ ಗಿಡಮರಗಳಿಲ್ಲದೆ ತುಂಬಾ ತೊಂದರೆ ಅನುಭವಿಸಬೇಕಾಗಿದೆ.

ಮಿಯಾಪುರ ರಸ್ತೆಯಲ್ಲಿರುವ 4.08ಗುಂಟೆ ಜಮೀನನ್ನು ಅಂಜನೇಯಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ದಾನವಾಗಿ ಕೊಡಲಾಗಿದೆ. ಆದರೆ, ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗದ ಕೊರತೆ ಇರುವುದರಿಂದ ಈ ಜಮೀನನ್ನು ಸ್ಮಶಾನವಾಗಿ ಬಳಕೆ ಮಾಡಲಾಗುತ್ತಿದೆ. ಇದನ್ನು ನಾಯಕರು, ಕುರುಬರು, ದಾಸರು, ಬ್ರಾಹ್ಮಣ, ವಿಶ್ವಕರ್ಮ, ಚಲವಾದಿ, ಮಡಿವಾಳರು ಹಾಗೂ ಗ್ರಾಮದಲ್ಲಿರುವ ಇನ್ನುಳಿದ ಜನಾಂಗದವರು ಶವಗಳ ಅಂತ್ಯಕ್ರಿಯೆಗೆ ಉಪಯೋಗಿಸುತ್ತಾರೆ.

ಈ ಸ್ಮಶಾನದ ಸುತ್ತಲೂ ತಂತಿ ಬೇಲಿ ಆಥವಾ ಕಾಂಪೌಂಡ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಹಾವು, ಚೇಳು, ವಿಷ ಜಂತುಗಳು ವಾಸವಾಗಿವೆ. ಸ್ಮಶಾನದಲ್ಲಿ ನೀರಿಗಾಗಿ ನಳದ ವ್ಯವಸ್ಥೆಯಾಗಲೀ ಆಥವಾ ಕೈಪಂಪ್‌ನ ವ್ಯವಸ್ಥೆಯಾಗಲೀ ಇಲ್ಲ. ನೆರಳಿಗೆ ಗಿಡಿಮರಗಳು ಸಹ ಇಲ್ಲ.

ಗ್ರಾಮದಲ್ಲಿರುವ ಮತ್ತೊಂದು ಹರಿಜನ ಸ್ಮಶಾನ ಸುಮಾರು 0.33ಗುಂಟೆ ವಿಸ್ತೀರ್ಣ ಹೊಂದಿದ್ದು, ಈ ಸ್ಮಶಾನವನ್ನು ಆದಿಕರ್ನಾಟಕ ಜನಾಂಗದವರು ಶವಗಳ ಅಂತ್ಯಕ್ರಿಯೆಗೆ ಉಪಯೋಗಿಸುತ್ತಾರೆ. ಈ ಸ್ಮಶಾನಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ.  ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಇರಲಿ; ತಂತಿ ಬೇಲಿಯೂ ಸಹ ಇಲ್ಲ. ನೀರಿನ ವ್ಯವಸ್ಥೆ ಇಲ್ಲ, ನೆರಳಿನ ವ್ಯವಸ್ಥೆ ಇಲ್ಲ. ಜಿಲ್ಲಾಡಳಿತ ಸ್ಮಶಾನಗಳ ಸುತ್ತಲೂ ಕಾಂಪೌಂಡ್, ಗೇಟ್‌ವ್ಯವಸ್ಥೆ, ನೀರಿನ ವ್ಯವಸ್ಥೆ ಹಾಗೂ ನೆರಳಿಗೆ ಗಿಡಗಳನ್ನು ನೆಡುವ ವ್ಯವಸ್ಥೆ ಮಾಡಿಸಬೇಕಾಗಿದೆ ಎಂದು ಗ್ರಾಮಸ್ಥರಾದ ಜಿ.ಎಸ್. ವೀರಣ್ಣಗೌಡ, ತುರಾಪುಟ್ಟಿ ಸುರೇಶ್, ಜಿ.ಟಿ. ಶ್ರೀನಿವಾಸ್, ಜಿ.ಟಿ. ಆಂಜನೇಯ, ಆರ್. ಕದರಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.