ADVERTISEMENT

ಮೇಯರ್ ಸ್ಥಾನ: ಸುಧಾ-ಜ್ಯೋತಿ ಮಧ್ಯೆ ಸ್ಪರ್ಧೆ!

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 6:20 IST
Last Updated 12 ಮಾರ್ಚ್ 2012, 6:20 IST

ದಾವಣಗೆರೆ: ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ ಅವಧಿ ಇನ್ನೊಂದು ವರ್ಷ ಇದ್ದು, ಕೊನೆಯ ಅವಧಿಯ ಮೇಯರ್ ಸ್ಥಾನ ಸುಧಾ ಜಯರುದ್ರೇಶ್ ಅಥವಾ ಜ್ಯೋತಿ ಸಿದ್ದೇಶ್‌ಗೆ ಹಾಗೂ ಉಪ ಮೇಯರ್ ಸ್ಥಾನ ಮಹೇಶ್ ರಾಯಚೂರ್ ಅವರಿಗೆ ಒಲಿಯುವ ಸಾಧ್ಯತೆ ದಟ್ಟವಾಗಿದೆ.

ನಗರಸಭೆಯಿಂದ ಮಹಾನಗರ ಪಾಲಿಕೆಯಾದ ನಂತರ 2008ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ 22 ಸ್ಥಾನ ಪಡೆದ ಬಿಜೆಪಿ ನೂತನ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇಬ್ಬರು ಪಕ್ಷೇತರರು ಬಿಜೆಪಿ ಸೇರಿದ ಕಾರಣ ಆ ಸಂಖ್ಯೆ 24ಕ್ಕೆ ಏರಿದೆ. ಉಳಿದಂತೆ ಕಾಂಗ್ರೆಸ್ 12 ಹಾಗೂ ಜೆಡಿಎಸ್ 5 ಸದಸ್ಯರನ್ನು ಹೊಂದಿದೆ.
ಸರ್ಕಾರದ ನಿಯಮದಂತೆ ಪ್ರತಿ ವರ್ಷ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡಲಾಗುತ್ತಿದ್ದು, ಈಗಾಗಲೇ 4 ಅವಧಿ ಮುಕ್ತಾಯಗೊಂಡಿದೆ.
 
5ನೇ ಅವಧಿಗೆ ಸಾಮಾನ್ಯ ಮಹಿಳೆ ಮೀಸಲು  ನಿಗದಿಯಾಗಿದೆ.     ಸಾಮಾನ್ಯ    ಮಹಿಳೆಯ  ಕೋಟಾದಲ್ಲಿ  ಮೇಯರ್   ಸ್ಥಾನ    ಅಲಂಕರಿಸಲು  ಪೈಪೋಟಿ   ನಡೆಯುತ್ತಿದ್ದು,  28ನೇ ವಾರ್ಡ್ ಸದಸ್ಯೆ  ಸುಧಾ ಜಯ ರುದ್ರೇಶ್, 32 ವಾರ್ಡ್ ಸದಸ್ಯೆ ಜ್ಯೋತಿ ಸಿದ್ದೇಶ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಹಿಂದೆ ಕಡಿಮೆ ಅವಧಿಯ ಕಾರಣ ನೀಡಿ ಉಪ ಮೇಯರ್ ಸ್ಥಾನ ತಿರಸ್ಕರಿಸಿದ್ದ ನಾಗರತ್ನಾ ವೆಂಕಟೇಶ್ ಕಾಟೆ ಅವರೂ ಕೂಡ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಬಿಜೆಪಿ ಜಿಲ್ಲಾ ವರಿಷ್ಠದ ಚಿತ್ತ ಸುಧಾ ಹಾಗೂ ಜ್ಯೋತಿ ಅವರ ಮೇಲಿದ್ದು, ಈ ಇಬ್ಬರಿಗೂ ಆರು ತಿಂಗಳು ಹಂಚಿಕೊಡುವ ಸಾಧ್ಯತೆ ಹೆಚ್ಚಾಗಿದೆ.

ಉಪ ಮೇಯರ್ ಸ್ಥಾನ ಬಿಸಿಎಂ `ಎ~ಗೆ ಮೀಸಲಾಗಿದ್ದು, ಸದಸ್ಯರಾದ ಪಿ.ಎಸ್. ಜಯಣ್ಣ, ಮಹೇಶ್ ರಾಯಚೂರು ಹಾಗೂ ಎಚ್.ಎನ್. ಗುರುನಾಥ್ ಆ ಗುಂಪಿಗೆ ಸೇರಿದ್ದಾರೆ. ಗುರುನಾಥ್ ಈಗಾಗಲೇ ಮೇಯರ್ ಸ್ಥಾನ ಅಲಂಕರಿಸಿದ್ದು, ಪಿ.ಎಸ್. ಜಯಣ್ಣ ಉಪ ಮೇಯರ್ ಸ್ಥಾನ ಅನುಭವಿಸಿದ್ದಾರೆ. ಹಾಗಾಗಿ, ಮಹೇಶ್ ರಾಯಚೂರು ಅವರಿಗೆ ಉಪ ಮೇಯರ್ ಸ್ಥಾನಕ್ಕೆ ಲಗ್ಗೆ ಹಾಕಲು ಹಾದಿ ಸುಗಮವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.