ADVERTISEMENT

ಯುಪಿಎ ಸರ್ಕಾರ ವಜಾಕ್ಕೆ ಆಗ್ರಹ

ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನಾ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:42 IST
Last Updated 8 ಡಿಸೆಂಬರ್ 2012, 6:42 IST

ದಾವಣಗೆರೆ:  ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಘಟಕ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ಸಾಮಾನ್ಯ ಜನರಿಗಾಗಿ ಸರ್ಕಾರ ಎಂಬ ಹೇಳಿಕೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ, ಸರಣಿ ಹಗರಣಗಳಲ್ಲಿ ಮುಳುಗಿದೆ. ಈ ಭ್ರಷ್ಟ, ಬಡಜನ ವಿರೋಧಿ ಸರ್ಕಾರವನ್ನು ರಾಷ್ಟ್ರಪತಿ ಕೂಡಲೇ ವಜಾಗೊಳಿಸಿ ದೇಶವನ್ನು ಉಳಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

್ಙ 1,76,000 ಕೋಟಿ ಮೊತ್ತದ 2ಜಿ ಸ್ಪೆಕ್ಟ್ರಂ ಹಗರಣ, ್ಙ 70,000 ಕೋಟಿಯ ಕಾಮನ್‌ವೆಲ್ತ್ ಗೇಮ್ ಹಗರಣ, ್ಙ 1,86,006 ಕೋಟಿಯ ಕಲ್ಲಿದ್ದಲು ಹಗರಣ, ್ಙ 58,000 ಕೋಟಿಯ ಆಹಾರ ಧಾನ್ಯ ಹಗರಣ, ಮೂವರು ಮುಖ್ಯಮಂತ್ರಿಗಳ ಆದರ್ಶ ಸೊಸೈಟಿ ಹಗರಣ, ಅಕ್ಕಿ ರಫ್ತು ಹಗರಣ, ಐಪಿಎಲ್ ಕ್ರಿಕೆಟ್ ಹಗರಣ... ಹೀಗೆ ಅನೇಕ ಹಗರಣಗಳಲ್ಲಿ ಸಿಲುಕಿಕೊಂಡಿರುವ ಕೇಂದ್ರ ಸರ್ಕಾರ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿ ಬಡವರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಗದಾ ಪ್ರಹಾರ ನಡೆಸಿದೆ ಎಂದು ಕಾರ್ಯಕರ್ತರು ಆರೋಪಿಸಿದರು.

ಎಫ್‌ಡಿಐನಿಂದ ವಾಲ್‌ಮಾರ್ಟ್ ನಂತಹ ಬಹುರಾಷ್ಟ್ರೀಯ ಕಂಪೆನಿಗಳ ಹಿತ ಕಾಪಾಡಲು ಮುಂದಾಗಿರುವ ಯುಪಿಎ ಸರ್ಕಾರದ ಕ್ರಮ ಖಂಡನೀಯ. ಅಗತ್ಯವಸ್ತುಗಳ ಬೆಲೆ ಏರಿಕೆ ಮೂಲಕ ಯುಪಿಎ ಸರ್ಕಾರ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಕೂಡಲೇ ರಾಷ್ಟ್ರಪತಿ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಕಚೇರಿಯಿಂದ ಮಹಾತ್ಮ ಗಾಂಧಿ ವೃತ್ತದ ಮೂಲಕ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಉಪ ವಿಭಾಗಾಧಿಕಾರಿ ಡಾ.ಎ. ನಾಗರಾಜ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿಯ ಮುಖಂಡರಾದ ಕೆ.ಜಿ. ಕಲ್ಲಪ್ಪ, ಡಿ.ಎಸ್. ಶಿವಶಂಕರ್, ಎಚ್.ಎಸ್. ಲಿಂಗರಾಜು, ಯಶವಂತರಾವ್ ಜಾಧವ್, ಎಚ್.ಎನ್. ಶಿವಕುಮಾರ, ಬಿ. ರಮೇಶನಾಯ್ಕ, ಸುಧಾ ಜಯರುದ್ರೇಶ್, ಉಮಾ ಪ್ರಕಾಶ್, ಪುಷ್ಪಾ ದುರ್ಗೇಶ್, ಜ್ಯೋತಿ ಸಿದ್ದೇಶ್, ಕೆ.ಎಚ್. ಹನುಮಂತಪ್ಪ, ಸುಧಾ ವೀರೇಂದ್ರಪಾಟೀಲ್, ಮಲ್ಲೇಶ್, ನಾಗರತ್ನಾ ಕಾಟೆ, ಮಂಜುನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT