ADVERTISEMENT

ರಸ್ತೆಯಲ್ಲಿ ಚಹಾ ತಯಾರಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 8:15 IST
Last Updated 13 ಅಕ್ಟೋಬರ್ 2012, 8:15 IST

ಚಿತ್ರದುರ್ಗ: ಪ್ರತಿ ಕುಟುಂಬಕ್ಕೆ 6 ಅಡುಗೆ ಅನಿಲ ಮಿತಿಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಕಟ್ಟಿಗೆ ಒಲೆಯಲ್ಲಿ ಚಹಾ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ನಗರದ ಮುಖ್ಯರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೇಂದ್ರದ ಯುಪಿಎ ಸರ್ಕಾರ ವರ್ಷಕ್ಕೆ 6 ಸಿಲಿಂಡರ್ ಮಿತಿಗೊಳಿಸುವ ಮೂಲಕ ಮಧ್ಯಮ ಹಾಗೂ ಬಡ ವರ್ಗದ ಜನರು ಸಂಕಷ್ಠಕ್ಕೆ ಸಿಲುಕಿದ್ದಾರೆ. ದೇಶದಲ್ಲಿ ಶೇ 99.57ರಷ್ಠು ಜನರು ಗ್ಯಾಸ್ ಸಂಪರ್ಕ ಪಡೆದಿದ್ದಾರೆ. ಅದರಲ್ಲಿ ನೂರು ಜನರಲ್ಲಿ 73 ಜನರು ತಿಂಗಳಿಗೆ 1 ಸಿಲಿಂಡರ್ ಬೇಕು ಎನ್ನುತ್ತಾರೆ. ಕೇವಲ ಶೇ 6ರಷ್ಠು ಜನ ಮಾತ್ರ ವರ್ಷಕ್ಕೆ 6 ಸಿಲಿಂಡರ್ ಸಾಕು ಎನ್ನುತ್ತಿದ್ದಾರೆ. ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಅಡುಗೆ ಅನಿಲಕ್ಕೆ ಯಾವುದೇ ಕೊರತೆ ಇರಲಿಲ್ಲ. ಆದರೆ, ಯುಪಿಎ ಸರ್ಕಾರ ಅಧಿಕಾರ ಬಂದಾಗಿನಿಂದ ಅಡುಗೆ ಅನಿಲದ ಅಭಾವ ಸೃಷ್ಟಿಸಿದೆ. ಸಬ್ಸಿಡಿ ರಹಿತ ಸಿಲಿಂಡರ್  ಬೇಕಾದರೆ ್ಙ 890 ನೀಡಿ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ನೀತಿಯಿಂದ ಜನಸಾಮಾನ್ಯರ ಜೀವನ ಅತಂತ್ರವಾಗಿದೆ. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೂ ತೊಂದೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಧುಶ್ರಿ, ಜಿಲ್ಲಾ ಘಟಕದ ಎ.ವಿ. ಮಂಜುಳಾ, ವೇದಾವತಿ, ಸುಮ, ಸಿದ್ದೇಶ್ವರಿ, ಟಿ.ಆರ್. ಬಸಮ್ಮ, ಪಿ. ದುರುಗಮ್ಮ, ಕೆ. ಜಯಕುಮಾರಿ, ಇಂದ್ರಾಣಿ, ರಾಧ, ಎಚ್. ಸುವರ್ಣಮ್ಮ, ಡಿ. ನಿಂಗಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.