ನ್ಯಾಮತಿ: ಸಮೀಪದ ಎಚ್. ಕಡದಕಟ್ಟೆ ಗ್ರಾಮದೇವತೆ ಲಕ್ಷ್ಮೀರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಪ್ರತಿವರ್ಷದಂತೆ ಶನಿವಾರ ರಾಮನವಮಿ ದಿನದಂದು ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಈ ನಿಮಿತ್ತ ಸ್ವಾಮಿಗೆ ವಿಶೇಷವಾಗಿ ಪಂಚಾಭಿಷೇಕ, ಬೆಳ್ಳಿ ಆಲಂಕಾರ, ವಿವಿಧ ಧಾರ್ಮಿಕ ಆಚರಣೆಗಳ ನಂತರ ಶನಿವಾರ ಬೆಳಿಗ್ಗೆ ಆಲಂಕೃತ ರಥದಲ್ಲಿ ಲಕ್ಷ್ಮೀರಂಗನಾಥಸ್ವಾಮಿ, ದಾಸರಹಟ್ಟಿ ರಂಗನಾಥ, ಅರೆಹಳ್ಳಿ ರಂಗನಾಥ, ಗೊರವನಹಳ್ಳಿ ರಂಗನಾಥ ಹಾಗೂ ದುರ್ಗಮ್ಮ ದೇವಿಗಳ ಮೂರ್ತಿಗಳನ್ನು ಕುಳ್ಳಿರಿಸಿ ಬ್ರಹ್ಮ ರಥೋತ್ಸವ ನೆರವೇರಿತು. ಭಾನುವಾರ ಬೆಳಿಗ್ಗೆ ನೂರಾರು ಭಕ್ತರ ಸಮ್ಮುಖದಲ್ಲಿ ರಥ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಭಕ್ತರು ಪಟಾಕಿ ಸಿಡಿಸಿದರು. ಕೀಲುಕುದುರೆ ನೃತ್ಯ ರಥದ ಮೆರುಗನ್ನು ಹೆಚ್ಚಿಸಿತು. ನಂತರ ದೇವಸ್ಥಾನ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.
ನೂತನ ರಥ: ರಂಗನಾಥಸ್ವಾಮಿಗೆ ಸುಮಾರು ್ಙ 60ಲಕ್ಷ ವೆಚ್ಚದಲ್ಲಿ ನೂತನ ಮರದ ರಥ ನಿರ್ಮಿಸಿದ್ದು, ರಥದ ಸುತ್ತಲೂ 626 ಕೆ.ಜಿ. ಹಿತ್ತಾಳೆ ತಗಡಿನಲ್ಲಿ ಕೆತ್ತನೆ ಕೆಲಸ ನಡೆಸಿ ಅಳವಡಿಸಿ ಸುಂದರ ರಥ ನಿರ್ಮಿಸಿರುವುದು ಈ ಬಾರಿಯ ವಿಶೇಷ. ನೂತನ ರಥವನ್ನು ಶಿವನಿ ಹತ್ತಿರದ ಗಡೆಹಳ್ಳಿ ಮೌನೇಶಚಾರ್ ಹಾಗೂ ಹಿತ್ತಾಳೆ ಕೆತ್ತನೆ ಕೆಲಸವನ್ನು ತಮಿಳುನಾಡಿನ ಮೂಲದವರು ಸುಂದರವಾಗಿ ಮಾಡಿದ್ದಾರೆ.
ಬೆಂಗಳೂರಿನ ಜಯಪ್ರಕಾಶ್ ರೆಡ್ಡಿ ಅವರು ಹಿತ್ತಾಳೆಯನ್ನು ರಥಕ್ಕೆ ಕೊಡುಗೆಯಾಗಿ ನೀಡಿದ್ದಾರೆ, ಸಾರ್ವಜನಿಕರು ಮತ್ತು ಭಕ್ತರ ನೆರವಿನಿಂದ ನೂತನ ರಥವನ್ನು ನಿರ್ಮಿಸಲಾಗಿದೆ ಎಂದು ದೇವಸ್ಥಾನದ ಆರ್ಚಕ ಕೆ.ಎಚ್. ಸುರೇಶ್, ಧರ್ಮದರ್ಶಿ ಟಿ. ನಾಗರಾಜ, ಹಿರಿಯರಾದ ವೆಂಕಟೇಶಪ್ಪ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.