ADVERTISEMENT

ವಾಜಪೇಯಿ ಆದರ್ಶ ಅನುಸರಿಸಿ: ಸಚಿವ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 5:13 IST
Last Updated 26 ಡಿಸೆಂಬರ್ 2012, 5:13 IST

ದಾವಣಗೆರೆ: ಅಟಲ್ ಬಿಹಾರಿ ವಾಜಪೇಯಿ ಅವರು ಜನಸ್ನೇಹಿ ರಾಜಕಾರಣಿಯಾಗಿದ್ದು, ಅವರ ಆದರ್ಶಗಳನ್ನು ಇಂದಿನ ಎಲ್ಲ ರಾಜಕಾರಣಿಗಳು, ಬಿಜೆಪಿ ಕಾರ್ಯಕರ್ತರು ಅಳವಡಿಸಿಕೊಳ್ಳಬೇಕಿದೆ ಎಂದು ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 88ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.

ಜನಸಂಘದ ಕಾಲದಲ್ಲಿಯೂ ಪಕ್ಷ ಸಂಘಟನೆಯಲ್ಲಿ ತೊಡಗಿ ಮೊರಾರ್ಜಿ ದೇಸಾಯಿ ಅವರನ್ನು ಪ್ರಧಾನಿಯನ್ನಾಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ಅವರು  ಯಾವತ್ತೂ ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ಅವರ ದೂರದೃಷ್ಟಿ ಪಕ್ಷ ಸಂಘಟನಾ ಚತುರತೆಯ ಫಲವಾಗಿ ದೇಶದ 30 ರಾಜ್ಯಗಳ ಪೈಕಿ ಅರ್ಧದಷ್ಟು ರಾಜ್ಯಗಳಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯಬೇಕು. ಇಂದು ಅಧಿಕಾರ ಇದ್ದಾಗ ಬಿಜೆಪಿ, ತಮ್ಮ ಕೆಲಸ ಆಗದಿದ್ದಾಗ ನಿಷ್ಠೆ ಬದಲಾಯಿಸಿ ಕೆಜೆಪಿ ಅನ್ನುತ್ತಾರೆ. ಅಲ್ಲದೇ ಕಾರ್ಯಕರ್ತರಿಗೆ ಹಣ, ಹೆಂಡದ ಆಮಿಷ ನೀಡಿ ಸೆಳೆಯಲು ಯತ್ನಿಸಲಾಗುತ್ತಿದೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಎಚ್ಚರವಹಿಸಿ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.

ತುರ್ತು ಪರಿಸ್ಥಿತಿ ಸಂದರ್ಭ ಜೈಲು ಸೇರಿದವರ ಪೈಕಿ ಬಹುತೇಕ ಆರ್‌ಎಸ್‌ಎಸ್ ನಾಯಕರೇ ಇದ್ದರು. ಒಂದು ಜನಪರ, ರಾಷ್ಟ್ರಕಟ್ಟುವ ಹೋರಾಟದಲ್ಲಿ ಪಾಲ್ಗೊಳ್ಳುವ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ ಎಂದರು.

ವಿಧಾನಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ವಾಜಪೇಯಿ ಅವರು ಮುತ್ಸದ್ದಿ ರಾಜಕಾರಣಿ. ನಾವು ಕಾವೇರಿ ನದಿ ವಿವಾದದಲ್ಲಿ ಕಿತ್ತಾಡುತ್ತಿದ್ದರೆ ವಾಜಪೇಯಿ ಅವರು ಗಂಗಾ -  ಕಾವೇರಿ ನದಿ ಜೋಡಣೆ ಬಗ್ಗೆ ಚಿಂತನೆ ನಡೆಸಿದ್ದರು ಎಂದು ವಿಶ್ಲೇಷಿಸಿದರು.

ಶೀಲಾ ಗದಿಗೇಶ್, ಮೇಯರ್ ಸುಧಾ ಜಯರುದ್ರೇಶ್, ಯಶವಂತರಾವ್ ಜಾಧವ್, ಕಲ್ಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.