ಮಲೇಬೆನ್ನೂರು: ಸಮೀಪದ ನಿಟ್ಟೂರು ಗ್ರಾಮದಲ್ಲಿ ವಾಂತಿ-ಬೇಧಿ ಬಾಧೆಯಿಂದ ಅಸ್ವಸ್ಥರಾದ 38 ಜನರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ಸಂಭವಿಸಿದೆ.
ಮಲ್ಲೇಶಪ್ಪ ಬಡಾವಣೆಯಲ್ಲಿನ ತಿಪ್ಪೇಸ್ವಾಮಿ ಎಂಬುವವರ ಮಗಳು ಪುಷ್ಪವತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ `ಆರತಿ~ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಭೂರಿಭೋಜನದೊಂದಿಗೆ ಶಾವಿಗೆ ಪಾಯಸ, ಬೂಂದಿ ಸವಿದು ಸುಖನಿದ್ರೆಯಲ್ಲಿದ್ದವರಿಗೆ ಏಕಾಏಕಿ ಮಧ್ಯರಾತ್ರಿ ನಂತರ ಹೊಟ್ಟೆ ತೊಳೆಸುವುದು, ನೋವು, ವಾಕರಿಕೆ, ವಾಂತಿ ಬೇಧಿ ಕಾಣಿಸಿಕೊಂಡಿದೆ.
ಸುಮಾರು ರಾತ್ರಿ 2 ಗಂಟೆ ಹೊತ್ತಿಗೆ ಕೆಲವರು ಅಸ್ವಸ್ಥರಾದ ತಕ್ಷಣ ಗ್ರಾಮಸ್ಥರು ಟ್ರ್ಯಾಕ್ಟರ್ನಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಬೆಳಗಿನಜಾವ 3.30 ರ ಸುಮಾರಿಗೆ 25ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ ಎಂಬ ದೂರವಾಣಿ ಕರೆ ಬಂದ ತಕ್ಷಣ ತುರ್ತುಸೇವೆಯ 108 ವಾಹನ ಗ್ರಾಮಕ್ಕೆ ಧಾವಿಸಿ ತಂಡಗಳಲ್ಲಿ ಆಸ್ಪತ್ರೆಗೆ ಕರೆ ತಂದರು.
ಅದರಲ್ಲಿ ಪ್ರವೀಣ ಎಂಬ ಬಾಲಕನಿಗೆ ರಕ್ತದ ವಾಂತಿ ಬೇಧಿ ಆರಂಭವಾಗಿ ಕೆಲಕಾಲ ಆಸ್ಪತ್ರೆಯಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.
ರಾತ್ರಿಪಾಳಿ ವೈದ್ಯ ಡಾ.ನಿಸಾರ್ ಅಹ್ಮದ್, ಕರ್ತವ್ಯ ವೈದ್ಯಾಧಿಕಾರಿ ಡಾ.ಪ್ರಭು ಹಾಗೂ ಸಿಬ್ಬಂದಿ ಎಲ್ಲ ರೋಗಿಗಳಿಗೆ ಗ್ಲುಕೋಸ್ ದ್ರಾವಣ ಹಾಕಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. 38 ರೋಗಿಗಳಿಗೆ 250ಕ್ಕೂ ಹೆಚ್ಚು ಗ್ಲುಕೋಸ್ ಬಾಟಲ್ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಮಂಚಕ್ಕೆ ಪರದಾಟ: ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತಾನಹರಣ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 15 ಮಹಿಳೆಯರು ಜತೆಯಲ್ಲಿ ಸಹಾಯಕರೊಂದಿಗೆ ಮೊದಲೇ ವಾರ್ಡ್ಗಳಲ್ಲಿದ್ದರು.
ಏಕಾಏಕಿ 38 ರೋಗಿಗಳು ದಾಖಲಾದ ನಂತರ ಸ್ಥಳಾಭಾವ ಉಂಟಾಗಿತ್ತು. ಪಡಸಾಲೆ, ನೆಲ, ಲ್ಯಾಬ್ ಕಟ್ಟೆಮೇಲೆ ಮಲಗಿಸಿ ಚಿಕಿತ್ಸೆ ನೀಡಿದರು.
ಗ್ಲುಕೋಸ್ ಬಾಟಲಿಗಳನ್ನು ಸ್ಟ್ಯಾಂಡ್ಗಳ ಬದಲಿಗೆ ಗೋಡೆಗೆ ಮಳೆ ಬಡಿದು ತೂಗು ಹಾಕಿದ್ದರು. ರೋಗಿಗಳ ಸಹಾಯಕ್ಕೆ ಬಂದವರು ಆಸ್ಪತ್ರೆ ತುಂಬ ಎಲ್ಲೆಂದರಲ್ಲಿ ಮಲಗಿದ್ದರು.
ವಿಶೇಷ: ವೈದ್ಯರು ಚಿಕಿತ್ಸೆ ನೀಡುವಾಗ 3 ಗರ್ಭಿಣಿಯರಿಗೆ ಡೆಲಿವರಿ ಮಾಡಿ ಮಾನವೀಯತೆ ಮೆರೆದರು. ಗ್ರಾ.ಪಂ ಸದಸ್ಯ ಫಕ್ರುದ್ದೀನ್, ಸಮಾಜ ಸೇವಕ ಗಫಾರ್ಖಾನ್ ರಾತ್ರಿ ವೇಳೆ ವೈದ್ಯರಿಗೆ ಸಹಾಯ ಮಾಡಿದ್ದು ವಿಶೇಷ.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೂಕ್ತ ಸಿಬ್ಬಂದಿ, ಮಂಚ, ಹಾಸಿಗೆ ಸೌಲಭ್ಯ ಒದಗಿಸದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ದೇವರಬೆಳಕೆರೆ ಆರೋಗ್ಯ ಕೇಂದ್ರದ ಡಾ.ಮುರಳೀಧರ್ ಹಾಗೂ ತಂಡದವರು ಮುಂಜಾಗ್ರತೆ ದೃಷ್ಟಿಯಿಂದ ಗ್ರಾಮದಲ್ಲಿ ಮೊಕ್ಕಾಂ ಹೂಡಿರುವುದಾಗಿ ತಿಳಿಸಿದರು.
ವಿಷವಾದ ಪಾಯಸ: ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ತಯಾರಿಸಿದ ಶಾವಿಗೆ ಪಾಯಸ ರಾತ್ರಿ ಹೊತ್ತಿಗೆ ವಿಷಪೂರಿತವಾಗಿರಬಹುದು ಎಂದು ಉಪಸ್ಥಿತರು ಶಂಕೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.