ADVERTISEMENT

ಶಾಂತಿಯುತ ಗಣೇಶ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 7:05 IST
Last Updated 15 ಸೆಪ್ಟೆಂಬರ್ 2011, 7:05 IST

ಮಲೇಬೆನ್ನೂರು: ಇಲ್ಲಿನ ಪುರಾತನ ಹುಲಿಕಂಥಿ ಹಿರೆಮಠ ಹಾಗೂ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿ ವಿಸರ್ಜನೆ 13ನೇ ದಿನ ಮಂಗಳವಾರ ಅದ್ದೂರಿಯಾಗಿ ಪೊಲೀಸ್ ಬಿಗಿಭದ್ರತೆ ಮಧ್ಯೆ ಜರುಗಿತು.

ಸಂಜೆ 5ಕ್ಕೆ ಪೇಟೆಬೀದಿಯಿಂದ ಸಾಗಿ ಬಂದ ಮೆರವಣಿಗೆ ಕಾಲಭೈರವ ರಸ್ತೆ, ರಾಜಬೀದಿ, ಜಾಮಿಯಾ ಮಸೀದಿ ಮುಂಭಾಗ, ಮುಖ್ಯವೃತ್ತ ಹಾಗೂ ಬಸವೇಶ್ವರ ಬಡಾವಣೆಯ ಆಜಾದ್‌ನಗರ ಮೂಲಕ ಸಾಗಿ ಬೆಳಗಿನ ಜಾವಾ 2ಕ್ಕೆ ಗಣೇಶ ವಿಸರ್ಜನೆ ಮಾಡಲಾಯಿತು.

ಗ್ರಾಮದ ಬೀದಿಗಳು ಹಾಗೂ ಆಯಕಟ್ಟಿನ ಸ್ಥಳಕ್ಕೆ ಪೊಲೀಸ್ ಸರ್ಪಗಾವಲು ಹಾಕಿದ್ದರು.  4 ದಿಕ್ಕಿನಿಂದ ವೀಡಿಯೊ ಚಿತ್ರೀಕರಣ, ಎತ್ತರದ ಕಟ್ಟಡದ ಮೇಲೆ ಶಸ್ತ್ರಸಜ್ಜಿತ ಸಿಬ್ಬಂದಿ ಗಸ್ತಿನಲ್ಲಿದ್ದರು.

ಅಂಗಡಿ ಮುಂಗಟ್ಟು ಬಾಗಿಲು ಹಾಕ್ದ್ದಿದು, ಅಘೋಷಿತ ಬಂದ್‌ವಾತಾವರಣ ನಿರ್ಮಾಣವಾಗಿತ್ತು. ರಸ್ತೆ ಮೆರವಣಿಗೆಕಾರರಿಂದ ತುಂಬಿದ ಕಾರಣ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

ಬಿಗಿಭದ್ರತೆ: ಮೆರವಣಿಗೆಗೆ ಹಿರಿಯ ಪೊಲೀಸ್ ಅಧಿಕಾರಿ ಚೌಹಾಣ್, ಹೆಚ್ಚುವರಿ ಎಸ್ಪಿ ಅನುಪಮ್ ಅಗರವಾಲ್ ಸೇರಿದಂತೆ 16 ಪಿಎಸ್‌ಐ, 6 ಸಿಪಿಐ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 250 ಪೊಲೀಸ್  ಹಾಗೂ ಸುತ್ತಮುತ್ತಲಿನ ಠಾಣೆ ಪೊಲೀಸರು ಆಗಮಿಸಿ ಬಿಗಿ ಭದ್ರತೆ  ಒದಗಿಸಿದ್ದು ಈ ಬಾರಿ ಗಣೇಶ ವಿಸರ್ಜನೆ ವಿಶೇಷ.

ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಲಿಲ್ಲ. 
ತಹಶೀಲ್ದಾರ್ ನಜ್ಮಾ, ಉಪ ತಹಶೀಲ್ದಾರ್ ರೆಹಾನ್‌ಪಾಷಾ, ಕಂದಾಯ ನಿರೀಕ್ಷಕ ಹಾಲೇಶಪ್ಪ, ಗ್ರಾಮಲೆಕ್ಕಾಧಿಕಾರಿ ಭಕ್ತವತ್ಸಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.