ನ್ಯಾಮತಿ: ಗ್ರಾಮೀಣ ಪ್ರದೇಶಗಳಲ್ಲಿ ಪರಸ್ಪರ ಸಂಘಟನೆ ಮನೋಭಾವದಿಂದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವ ಮೂಲಕ ಸಮಾಜದ ಪರಿವರ್ತನೆ ಆಗಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಅನುಷ್ಠಾನ ಯೋಜನಾಧಿಕಾರಿ ಚಂದ್ರಶೇಖರ್ ಅಭಿಪ್ರಾಯಪಟ್ಟರು. ಬುಧವಾರ ಸಮೀಪದ ಸೋಗಿಲು ಗ್ರಾಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಅನುಷ್ಠಾನಗೊಳಿಸುವ ಕಾರ್ಯಕ್ರಮ ಮತ್ತು ಸಮಾಲೋಚನಾ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ಕಾರೇತರ ಸಂಸ್ಥೆಯಾಗಿದ್ದು, ಗ್ರಾಮೀಣ ಪ್ರದೇಶದ ಬಡ ಜನತೆಗೆ ಹೈನುಗಾರಿಕೆ, ಕೃಷಿ, ರುದ್ರಭೂಮಿ ಅಭಿವೃದ್ಧಿ, ಸೇರಿದಂತೆ ಹಲವು ಯೋಜನೆಗಳನ್ನು ಧರ್ಮದ ಮೂಲಕ ಸಹಾಯಧನವನ್ನು ನೀಡಿ ಅವರನ್ನು ಮೇಲೆಕ್ಕೆತ್ತುವ ಕೆಲಸ ನಡೆದಿದೆ ಎಂದರು. ದಾವಣಗೆರೆ ಜಿಲ್ಲೆಯನ್ನು ಈ ಯೋಜನೆಗೆ ಅಳವಡಿಸಲು ಡಾ.ವೀರೇಂದ್ರ ಹೆಗ್ಗಡೆ ಅವರು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಮಾರಂಭದ ಉದ್ಘಾಟಿಸಿದ ಗ್ರಾಮದ ಹಿರಿಯರಾದ ಡಿ.ಪಿ. ರಾಜಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಒದಗುವ ಲಾಭಗಳನ್ನು ತಿಳಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ. ಮಲ್ಲೇಶಪ್ಪ, ಗ್ರಾ.ಪಂ. ಸದಸ್ಯ ಷಣ್ಮುಖಪ್ಪ, ಶಿಕ್ಷಕ ಗುರುಬಸಪ್ಪ ಮಾತನಾಡಿದರು. ಗ್ರಾಮದ ಮುಖಂಡರಾದ ಎಸ್.ಪಿ. ಚಂದ್ರಶೇಖರಪ್ಪಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಮೇಶ್ ಸ್ವಾಗತಿಸಿದರು, ಸಮನ್ವಯಾಧಿಕಾರಿ ಸೋಮನಿಂಗ್ ಕಾರ್ಯಕ್ರಮ ನಿರೂಪಿಸಿದರು, ಗುರುಬಸಪ್ಪ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.