ADVERTISEMENT

ಸಂಜೆ ಕಾಲೇಜು ಪ್ರಾಧ್ಯಾಪಕ ನೇಣಿಗೆ ಶರಣು

ಡೆತ್ ನೋಟ್ ಪತ್ತೆ: ವಿವಿ ವ್ಯವಸ್ಥೆ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 9:29 IST
Last Updated 21 ಡಿಸೆಂಬರ್ 2012, 9:29 IST

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯ ಸಂಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸರಸ್ವತಿಪುರಂನಲ್ಲಿ ಗುರುವಾರ ನಡೆದಿದೆ.

ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿಯವರಾದ, ಸರಸ್ವತಿಪುರಂ ಬಡಾವಣೆಯಲ್ಲಿ ವಾಸವಿದ್ದ ಪ್ರೊ.ಯು.ಬಿ. ಅಶೋಕ್‌ಕುಮಾರ್ (56) ನೇಣಿಗೆ ಶರಣಾದವರು. ಕುಟುಂಬ ಸಮೇತರಾಗಿ ಅಶೋಕ್‌ಕುಮಾರ್ ಬುಧವಾರ ಹಾಸನಕ್ಕೆ ತೆರಳಿದ್ದರು. ಪತ್ನಿ ಚಲುವಾಂಬಿಕಾ ಹಾಗೂ ಇಬ್ಬರು ಪುತ್ರಿಯರು ಹಾಸನದಲ್ಲೇ ಉಳಿದರೆ ಅಶೋಕ್‌ಕುಮಾರ್ ಬುಧವಾರ ರಾತ್ರಿಯೇ ನಗರಕ್ಕೆ ವಾಪಸ್ ಆಗಿದ್ದರು.

ಪತ್ನಿ ಮತ್ತು ಇಬ್ಬರು ಪುತ್ರಿಯರು ಮದುವೆ ಮುಗಿಸಿ ಗುರುವಾರ ಬೆಳಿಗ್ಗೆ 8.30ರ  ಸುಮಾರಿಗೆ ಮನೆಗೆ ಬಂದಾಗ  ಅಶೋಕ್ ಕುಮಾರ್  ಕೊಠಡಿಯಲ್ಲಿ  ನೇಣು ಹಾಕಿಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವುದು ಬೆಳಕಿಗೆ ಬಂತು.

ರಾಷ್ಟ್ರಪತಿಗೆ ಪತ್ರ: ಅಶೋಕ್‌ಕುಮಾರ್ ಆತ್ಮಹತ್ಯೆಗೂ ಮುನ್ನ ಎರಡು ಪತ್ರಗಳನ್ನು ಬರೆದಿಟ್ಟಿದ್ದಾರೆ. ರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ `ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಆಗಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತದೆ. ವ್ಯವಸ್ಥೆ ಹದಗೆಟ್ಟಿದೆ.

ಇದನ್ನು ಸರಿಮಾಡಬೇಕು' ಎಂದಿದ್ದರೆ `ಗುರುಗಳಾದ ಪಾರ್ವತಮ್ಮ ಅವರ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಪಾರ್ವತಮ್ಮ ಟ್ರಸ್ಟ್ ನಡೆಯುತ್ತಿಲ್ಲ. ಇದರಿಂದ ಅಸಮಾಧಾನವಾಗಿದೆ. ಸರಿಪಡಿಸಬೇಕು' ಎಂದು ಮತ್ತೊಂದು ಪತ್ರದಲ್ಲಿದೆ ಎಂದು ಪೊಲೀಸರು ತಿಳಿಸಿದರು.

ಸರಸ್ವತಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT