ADVERTISEMENT

ಸಹಕಾರ ತತ್ವ ಬಲಪಡಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 7:20 IST
Last Updated 7 ಫೆಬ್ರುವರಿ 2011, 7:20 IST

ದಾವಣಗೆರೆ: ಸಹಕಾರ ತತ್ವ ಬಲಪಡಿಸಲು ಪಿಕಾರ್ಡ್ ಬ್ಯಾಂಕುಗಳ ಅಧ್ಯಕ್ಷರು, ನಿರ್ದೇಶಕರು ಸಹಕಾರ ನೀಡಬೇಕು ಎಂದು ಬೆಂಗಳೂರಿನ ರಾಜ್ಯ ಸಹಕಾರ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಉಪಾಧ್ಯಕ್ಷ ಬೆಳ್ಳೂಡಿ ರಾಮಚಂದ್ರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್ ಜಿಲ್ಲೆಯ ಪಿಕಾರ್ಡ್ ಬ್ಯಾಂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ವ್ಯವಸ್ಥಾಪಕರಿಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ಕಾರ್ಯದಕ್ಷತೆ ಕುರಿತ ಒಂದು ದಿನದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಸಾಲ ವಸೂಲಾತಿ ಮಾಡುವ ವೇಳೆ ನಿರ್ದೇಶಕರು ಸಕಾಲಕ್ಕೆ ಪಾವತಿ ಮಾಡುವಂತೆ ಪ್ರಚಾರ ಕೈಗೊಳ್ಳಬೇಕು. ಸಹಕಾರ ಶಿಕ್ಷಣ ಹಾಗೂ ಪ್ರಚಾರದ ಯಶಸ್ವಿಗೆ ತರಬೇತಿ ಶಿಬಿರ ಪೂರಕ. ಹೀಗಾಗಿ, ಇದರ ಪ್ರಯೋಜನ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಎನ್.ಎಂ.ಜೆ.ಬಿ. ಆರಾಧ್ಯ ಮಾತನಾಡಿ, ಸಹಕಾರ ಶಿಕ್ಷಣ ಹಾಗೂ ತರಬೇತಿ ನಿರಂತರವಾಗಿ ನಡೆಯಬೇಕು. ಎಲ್ಲರೂ ‘ಸಹಕಾರ ಪತ್ರಿಕೆ’ಯ ಸದಸ್ಯತ್ವ ಪಡೆಯುವಂತಾಗಬೇಕು. ಈ ಮೂಲಕ ಸಹಕಾರ ಚಳವಳಿ ಯಶಸ್ವಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಜಿಲ್ಲಾ ಪಿಕಾರ್ಡ್ ಬ್ಯಾಂಕ್‌ನ ಸಂಶೋಧಕ ಮಂಜುನಾಥ್, ಜಿಲ್ಲಾ ಕ್ಯಾಸ್‌ಕಾರ್ಡ್ ಬ್ಯಾಂಕ್‌ನ ವ್ಯವಸ್ಥಾಪಕ ಕೆ. ಸುಬ್ರಮಣ್ಯ ಉಪನ್ಯಾಸ ನೀಡಿದರು.

ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ಮಾಜಿ ನಿರ್ದೇಶಕ ಬಿ.ವಿ. ಚಂದ್ರಶೇಖರ್, ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕ ಎಂ.ಕೆ. ಚಿದಾನಂದ, ಎಸ್. ಹಾಲಪ್ಪ ಇತರರು ಹಾಜರಿದ್ದರು. ಯೂನಿಯನ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪಿ. ಪಾಂಡುರಂಗಪ್ಪ ಸ್ವಾಗತಿಸಿದರು. ನಿರ್ದೇಶಕ ಜಿ. ಕರಿಬಸಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.