ದಾವಣಗೆರೆ: ಹೆಚ್ಚು ಆಹಾರ ಉತ್ಪಾದನೆಗಾಗಿ ಭೂಮಿಗೆ ಅತಿಹೆಚ್ಚು ರಸಗೊಬ್ಬರ, ಕ್ರಿಮಿನಾಶಕ ಬಳಸುತ್ತಿರುವುದರಿಂದ ಕೃಷಿ ಭೂಮಿ ಸಾರ ಹೀನವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಮಹೇಶ್ವರಪ್ಪ ಆತಂಕ ವ್ಯಕ್ತಪಡಿಸಿದರು.
ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪರಿಸರ ಸಂರಕ್ಷಣಾ ವೇದಿಕೆ, ಸಿದ್ದಗಂಗಾ ವಿದ್ಯಾಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿ ಕುರಿತ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪ್ರಸಕ್ತ ವರ್ಷ ಆಹಾರ ಅಪವ್ಯಯ ತಡೆ ಪರಿಕಲ್ಪನೆಯಲ್ಲಿ `ಯೋಚಿಸಿ... ಸೇವಿಸಿ... ಉಳಿಸಿ' ಘೋಷವಾಕ್ಯದ ಅಡಿ ಪರಿಸರ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ಆಹಾರ ಕೊರತೆಯಿದೆ. ಇದೇ ವೇಳೆ ಸಾಕಷ್ಟು ಪ್ರಮಾಣದ ಆಹಾರ ಅಪವ್ಯಯ ಆಗುತ್ತಿದೆ. ಆಹಾರ ಉತ್ಪಾದನೆಗಾಗಿ ರೈತರು ಕಾಡು, ಕೆರೆ, ನದಿದಂಡೆ, ಗೋಮಾಳಗಳನ್ನು ಒತ್ತುವರಿ ಮಾಡುವುದರಿಂದ ಪ್ರಕೃತಿ ನಾಶವಾಗುತ್ತಿದೆ.
ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿ ಅತಿವೃಷ್ಟಿ, ಅನಾವೃಷ್ಟಿಯಂಥ ವೈಪರೀತ್ಯ ಸೃಷ್ಟಿಗೆ ಕಾರಣವಾಗುತ್ತಿದೆ ಎಂದು ಹೇಳಿದರು. ಆಹಾರವನ್ನು ವ್ಯರ್ಥ ಮಾಡಬಾರದು. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದು ದಿನ ಆಹಾರಕ್ಕಾಗಿ ಯುದ್ಧ ಮಾಡುವ ಪರಿಸ್ಥಿತಿ ಬರಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್. ದೇವರಮನಿ ಮಾತನಾಡಿ, ದೇಶದಲ್ಲಿ ಪರಿಸರ ಸಂರಕ್ಷಣೆ ಸಂಬಂಧಿಸಿ ಸಾಕಷ್ಟು ಕಾನೂನುಗಳು ಇದ್ದರೂ ಪರಿಣಾಮಕಾರಿಯಾಗಿ ಜಾರಿ ಯಾಗುತ್ತಿಲ್ಲ. ಅದಕ್ಕಾಗಿ ತಮ್ಮ ಸಂಘಟನೆ ಪರಿಸರ ಇಲಾಖೆಯ ಅಧಿಕಾರಿಗಳ ಜತೆ ಸೇರಿಕೊಂಡು ಪರಿಸರ ಪೂರಕ ಚಟುವಟಿಕೆ ಹಮ್ಮಿಕೊಳ್ಳುತ್ತಿದೆ. ಆಹಾರ ಅಪವ್ಯಯ ಆಗದಂತೆ ಅಧಿಕಾರಿಗಳೂ ಸಹ `ತಿನ್ನುವುದನ್ನು' ಕಡಿಮೆ ಮಾಡಬೇಕು ಎಂದು ಹೇಳಿದರು.
ಹಿರಿಯ ಶಿಕ್ಷಕಿ ಉಷಾ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆಗಬೇಕು. ದೇಶದಲ್ಲಿ ಹವಾಮಾನ ವೈಪರೀತ್ಯ, ಬೆಳೆಗೆ ತಕ್ಕ ಬೆಲೆ ಸಿಗದಿರುವುದನ್ನು ಕಂಡು ರೋಸಿಹೋದ ರೈತ ಕೃಷಿಯಿಂದ ವಿಮುಖನಾಗುತ್ತಿದ್ದಾನೆ. ಕೃಷಿ ಭೂಮಿಯೂ ಕಡಿಮೆಯಾಗುತ್ತಿದೆ. ಆದ್ದರಿಂದ ಪರಿಸರ ರಕ್ಷಣೆ, ನೀರು ಪೋಲಾಗದಂತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ದೊಗ್ಗಳ್ಳಿ ಗೌಡ್ರ ಪುಟ್ಟರಾಜು ಕಾರ್ಯಕ್ರಮ ನಿರೂಪಿಸಿದರು. ಚಿನ್ನಸಮುದ್ರ ಸಿ.ಎಚ್. ಉಮೇಶ್ ಮತ್ತು ಸಂಗಡಿಗರು ಪರಿಸರ ಗೀತೆಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.