ADVERTISEMENT

ಸಾಲ ಮರುಪಾವತಿಸಿ: ಎಸ್‌ಎಆರ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 6:15 IST
Last Updated 19 ಮಾರ್ಚ್ 2012, 6:15 IST

ಚನ್ನಗಿರಿ: ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಸಂಘಗಳನ್ನು ನಡೆಸುವುದು ತುಂಬಾ ಕಷ್ಟಕರವಾದ ವಿಷಯವಾಗಿದೆ. ಆದರೆ, ಈ ನಲ್ಲೂರು ಗ್ರಾಮದ ಸಂಘ 100 ವಸಂತಗಳನ್ನು ಪೂರೈಸಿ ಲಾಭ ಗಳಿಸುತ್ತಿರುವುದು ಸ್ವಾಗತಾರ್ಹವಾದ ಸಂಗತಿಯಾಗಿದೆ. ಯಾವುದೇ ಸಂಘದಲ್ಲಿ ರೈತರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ಆ ಸಂಘ ಪ್ರಗತಿಯತ್ತ ಮುನ್ನಡೆಯುತ್ತದೆ ಎಂದು ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.

ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಭಾನುವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಮತ್ತು ವಾಣಿಜ್ಯ ಸಂಕೀರ್ಣ ಉದ್ಘಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಸಾಮಾನ್ಯರ ಕಷ್ಟಗಳಿಗೆ ಸಹಕಾರ ಸಂಘಗಳು ಸ್ಪಂದಿಸಬೇಕು. ಸಹಕಾರಿ ಕ್ಷೇತ್ರದಲ್ಲಿ ಮುನ್ನಡೆಯಲು ಪ್ರಾಮಾಣಿಕತೆ ಬಹಳ ಮುಖ್ಯ. ಸ್ವಲ್ಪ ಪ್ರಾಮಾಣಿಕತೆಯಲ್ಲಿ ಏರುಪೇರಾದರೂ ಸಂಘ ನಷ್ಟದಲ್ಲಿ ಸಾಗಿ ಮುಚ್ಚುವ ಪರಿಸ್ಥಿತಿ ಬರುತ್ತದೆ. ಸಂಘಗಳಲ್ಲಿ ರಾಜಕೀಯ ಹೊರತುಪಡಿಸಿ ರೈತರಿಗೆ ಸಾಲ ಸೌಲಭ್ಯವನ್ನು ನೀಡುವಂತಾಗಬೇಕು. ಶೇ. 1ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ವಿತರಣೆ ಮಾಡಿರುವುದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದರು.

ADVERTISEMENT

ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎ. ಮಂಜುನಾಥಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯವನ್ನು ನೀಡಲು ಚಿಂತನೆ ನಡೆಸಿದೆ. 2 ವರ್ಷದಲ್ಲಿ 18 ಲಕ್ಷ ರೈತರಿಗೆ  5,400 ಕೋಟಿ ಸಾಲವನ್ನು ನೀಡಲಾಗಿದೆ. ಕನಿಷ್ಠಪಕ್ಷ 25 ಲಕ್ಷ ರೈತರಿಗೆ ಸಾಲ ಸೌಲಭ್ಯವನ್ನು ನೀಡಬೇಕೆಂಬುದು ನಮ್ಮ ಮಹಾದಾಸೆಯಾಗಿದೆ. ಅಪೆಕ್ಸ್ ಬ್ಯಾಂಕ್‌ನಿಂದ ರಾಜ್ಯದಲ್ಲಿ ್ಙ 40 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ. ರೈತರು ಸಕಾಲಕ್ಕೆ ಸಾಲ ಮರುಪಾವತಿ ಮಾಡಿದರೆ ಮರು ಸಾಲ ನೀಡಲು ಸಹಾಯಕವಾಗುತ್ತದೆ ಎಂದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮಾಜಿ ಸಚಿವ ಬಸವಣ್ಣಪ್ಪ, ಮಾಜಿ ಶಾಸಕರಾದ ಕರಿಯಣ್ಣ, ವಡ್ನಾಳ್ ರಾಜಣ್ಣ, ಡಾ.ಎ. ಬಸವಣ್ಣಯ್ಯ, ಜಿ.ಪಂ. ಸದಸ್ಯರಾದ ಕೆ.ಜಿ. ಬಸವಲಿಂಗಪ್ಪ, ಪ್ರೇಮಾ ಲೋಕೇಶ್, `ತುಮ್ಕೊಸ್~ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಡಿ. ಪ್ರಕಾಶ್, ಆರ್.ಎಂ. ರವಿ, ಎಸ್.ಬಿ. ಶಿವಕುಮಾರ್, ಎಸ್. ರುದ್ರೇಗೌಡ ಮುಂತಾದವರು ಉಪಸ್ಥಿತರಿದ್ದರು.  ಎಚ್. ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘದ ಅಧ್ಯಕ್ಷ ಜಿ.ಎ. ರುದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿ.ಬಿ. ಹಾಲೇಶ್ ಸ್ವಾಗತಿಸಿದರು. ಎಚ್.ಬಿ. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.