ADVERTISEMENT

ಹರಿಹರ-ದಾವಣಗೆರೆ ಕಡೆಗಣನೆ ಸದಸ್ಯರ ತೀವ್ರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 9:15 IST
Last Updated 15 ಜೂನ್ 2011, 9:15 IST

ದಾವಣಗೆರೆ: ಜಿಲ್ಲೆಗೆ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆ ಅಡಿ ನೀಡಲಾದ ಅನುದಾನ ಬಳಕೆಯಿಂದ ದಾವಣಗೆರೆ ಹಾಗೂ ಹರಿಹರ ತಾಲ್ಲೂಕು ಹೊರಗಿಟ್ಟಿರುವುದಕ್ಕೆ ಆ ಭಾಗದ ಸದಸ್ಯರು ಜಿ.ಪಂ. ಸಾಮಾನ್ಯಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

3054ರ ಈ ಯೋಜನೆಯಲ್ಲಿ ಜಿಲ್ಲೆಗೆ ರೂ 3.80 ಕೋಟಿ ದೊರೆತಿದ್ದು, ಚನ್ನಗಿರಿ, ಹೊನ್ನಾಳಿ, ಹರಪನಹಳ್ಳಿ ಹಾಗೂ ಜಗಳೂರು ತಾಲ್ಲೂಕುಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ನಂಜುಂಡಪ್ಪ ವರದಿ ಆಧಾರದಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ ಎಂದು ಅಧ್ಯಕ್ಷ ಕೆ.ಜಿ. ಬಸವಲಿಂಗಪ್ಪ ಹಾಗೂ ಸಿಇಒ ಗುತ್ತಿ ಜಂಬುನಾಥ್ ತಿಳಿಸಿದರು.

ಆದರೆ, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರಾದ ಎಂ. ನಾಗೇಂದ್ರಪ್ಪ, ವೀರಭದ್ರಪ್ಪ ಮತ್ತಿತರರು, ಈ ಅಸಮಾನತೆ ಸರಿ ಪಡಿಸುವವರೆಗೂ ಕ್ರಿಯಾ ಯೋಜನೆಗೆ ಅನುಮತಿ ನೀಡಬಾರದು ಎಂದು ಪಟ್ಟು ಹಿಡಿದರು.

ಸ್ವತಃ ವಕೀಲರಾದ ನಾಗೇಂದ್ರಪ್ಪ ಈ ವಿಚಾರವಾಗಿ ವಾದಗಳ ಸರಣಿಯನ್ನೇ ಮಂಡಿಸಿದರು. ಕೊನೆಗೆ ಸಿಇಒ ಮಾತನಾಡಿ, ಹರಿಹರ-ದಾವಣಗೆರೆಗೆ ದೊರೆಯುವ ಅನುದಾನ ಹಾಗೆಯೇ ಉಳಿಸಿಕೊಂಡು, ಉಳಿದ ತಾಲ್ಲೂಕಿಗೆ ಅನುಮೋದನೆ ನೀಡಲಿ, ಮಳೆಗಾಲ ಆರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುತ್ತದೆ.

ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ ನಂತರ ಅನುಮತಿ ಪಡೆದು ಎರಡೂ ತಾಲ್ಲೂಕಿಗೆ ಅನುದಾನ ಬಳಸಲು ಅನುಮೋದನೆ ಪಡೆಯೋಣ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.