ADVERTISEMENT

ಹಾಸ್ಟೆಲ್ ವಿದ್ಯಾರ್ಥಿ ಸಾವು; ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 8:32 IST
Last Updated 15 ಡಿಸೆಂಬರ್ 2012, 8:32 IST

ದಾವಣಗೆರೆ: ಹಾಸ್ಟೆಲ್ ವಿದ್ಯಾರ್ಥಿಯೊಬ್ಬ ಅಸ್ವಸ್ಥಗೊಂಡು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ನಗರದ ಬಿಸಿಎಂ ಹಾಸ್ಟೆಲ್‌ನ ಚಾಮುಂಡೇಶ್ವರಿ ಐಟಿಐ ವಿದ್ಯಾರ್ಥಿ ಗಜೇಂದ್ರ (20) ಮೃತಪಟ್ಟವರು. ಮೂಲತಃ ತಾಲ್ಲೂಕಿನ ಹೊಸಕೂಳೇನಹಳ್ಳಿಯ ತಿಪ್ಪೇಶಪ್ಪ- ಸುನಂದಮ್ಮ ದಂಪತಿಯ ದ್ವಿತೀಯ ಪುತ್ರ ಗಜೇಂದ್ರ ಎಲೆಕ್ಟ್ರೀಷಿಯನ್ ವಿಷಯದಲ್ಲಿ ದ್ವಿತೀಯ ವರ್ಷ ಡಿಪ್ಲೊಮಾ ಓದುತ್ತಿದ್ದರು. ಗಜೇಂದ್ರ ಅವರ ಸಾವಿಗೆ ಸಹಪಾಠಿಗಳು ಚಹಾದಲ್ಲಿ ವಿಷ ಬೆರೆಸಿದ್ದೇ ಕಾರಣ ಎಂದು ಬಂಧುಗಳು ಆರೋಪಿಸಿ ದೂರು ನೀಡಿದ್ದಾರೆ.

ಮುಳುವಾದ ಮೊಬೈಲ್?: ಗಜೇಂದ್ರ ಅವರು ತಮ್ಮ ಸ್ನೇಹಿತ ಅಜಯ್ ಎಂಬಾತನಿಗೆ ್ಙ   1,200ಕ್ಕೆ ಮೊಬೈಲ್ ಮಾರಾಟ ಮಾಡಿದ್ದ. ಆದರೆ, ಅದರ ಮೌಲ್ಯ ಅಷ್ಟು ಇಲ್ಲ ಎಂದು ಭಾವಿಸಿದ ಅಜಯ್ ತಾನು ನೀಡಿದ ಹಣದಲ್ಲಿ ್ಙ 600 ಹಿಂದಿರುಗಿಸಲು ಕೇಳಿದ ಎನ್ನಲಾಗಿದೆ. ಅದೇ ವಿಚಾರಕ್ಕೆ ಡಿ. 10ರಂದು ಅಜಯ್, ಪ್ರವೀಣ್ ಮತ್ತು ಸಂತೋಷ್ ಸೇರಿ ಗಜೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡು ಹಲ್ಲೆ ನಡೆಸಿದ್ದರು. ಈ ಸಂಬಂಧ ಗಜೇಂದ್ರ ಹಾಸ್ಟೆಲ್ ವಾರ್ಡನ್‌ಗೆ ದೂರು ನೀಡಿದ್ದರು.

  ಮರುದಿನ  (ಡಿ.11) ಸಂಜೆ  ಚಹಾದಲ್ಲಿ ವಿಷ  ಬೆರೆಸಿ ಗಜೇಂದ್ರ  ಅವರಿಗೆ ನೀಡಲಾಗಿದೆ. ವಿಷ ಬೆರೆತಿರುವುದು ಅರಿಯದ ಗಜೇಂದ್ರ ಅದನ್ನು ಸೇವಿಸಿದ್ದರು. ರಾತ್ರಿ ಊಟದ ವೇಳೆಗೆ ತೀವ್ರ ಅಸ್ವಸ್ಥರಾದ ಅವರನ್ನು ಸಿ.ಜಿ. ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಬಳಿಕ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಗುರುವಾರ ತಡರಾತ್ರಿ ತೀವ್ರ  ಅಸ್ವಸ್ಥರಾದ  ಅವರನ್ನು  ಮಣಿಪಾಲದ   ಆಸ್ಪತ್ರೆಗೆ  ಸಾಗಿಸಲು ಸಿದ್ಧತೆ ನಡೆಯುತ್ತಿದ್ದಾಗ ಗಜೇಂದ್ರ ನೆಯುಸಿರೆಳೆದರು ಎಂದು ಅವರ ಹತ್ತಿರದ ಬಂಧು ಗಿರೀಶ್ ಮಾಹಿತಿ ನೀಡಿದರು.

ಘಟನೆಗೆ ಸಂಬಂಧಿಸಿ ಪ್ರವೀಣ್, ಅಜಯ್ ಹಾಗೂ ಸಂತೋಷ್ ಅವರನ್ನು ಕೆಟಿಜೆ ನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ. ಸಿ.ಜಿ. ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಡಿಕ್ಕಿ: ವ್ಯಕ್ತಿ ಸಾವು
ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಟ್ರ್ಯಾಕ್ಟರ್ ಡಿಕ್ಕಿಯಾಗಿ  ಹೊಸಹಟ್ಟಿ ದ್ಯಾಮಪ್ಪ (30) ಗುರುವಾರ ಮೃತಪಟ್ಟಿದ್ದಾರೆ.  ಗಾಯಗೊಂಡ ಅವರನ್ನು ಉಚ್ಚಂಗಿದುರ್ಗ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.  ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಕ್ಷಕಿ ಅಮಾನತು
ಚನ್ನಗಿರಿ ತಾಲ್ಲೂಕು ನಲ್ಲೂರಿನ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಶಿಕ್ಷಕಿ ಕೆ. ಶಾಂತಿಬಾಯಿ ಅವರು ನ. 29ರಂದು ್ಙ  600 ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಕೈಗೆ ಸಿಕ್ಕಿಬ್ದ್ದಿದ್ದ್ದಿದರು.ಈ ಹಿನ್ನೆಲೆಯಲ್ಲಿ ಅವರನ್ನು ಶಿಕ್ಷಣ ಇಲಾಖೆ ಆಯುಕ್ತರ ಆದೇಶದ ಮೇರೆಗೆ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಕೆ. ಶಿವಕುಮಾರ್ ಅಮಾನತುಗೊಳಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.