ಹರಿಹರ: ಸಂಶೋಧನೆಯಿಂದ ವಿಷಯದ ಬಗ್ಗೆ ಹೊಸ ಹೊಸ ವಿಚಾರ ಹಾಗೂ ಅಭಿಪ್ರಾಯ ಮಂಡನೆ ಆಗುತ್ತದೆ ಎಂದು ಕಾನೂನು
ಮತ್ತು ಮಾನವ ಹಕ್ಕುಗಳ ಇಲಾಖೆಯ ಉಪಕಾರ್ಯದರ್ಶಿ ಉಮೇಶ್ ಮೂಲಿಮನಿ ಅಭಿಪ್ರಾಯಪಟ್ಟರು.
ನಗರದ ಎಸ್ಜೆವಿಪಿ ಸ್ವಾಯತ್ತ ಕಾಲೇಜಿನ ಸಭಾಂಗಣದಲ್ಲಿ ತಾಲ್ಲೂಕು ಕಸಾಪ, ಚುಟುಕು ಸಾಹಿತ್ಯ ಪರಿಷತ್ ಮತ್ತು ಸಹನಾದ್ರಿ ಪ್ರಕಾಶನದ ಆಶ್ರಯದಲ್ಲಿ ಭಾನುವಾರ ನಡೆದ ಡಾ.ನಾ.ಕೊಟ್ರೇಶ್ ಉತ್ತಂಗಿ ಸಂಶೋಧನಾ ಕೃತಿ ‘ಹರಿಹರದೆಳೆಗಳು’ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬರವಣಿಗೆ ಮತ್ತು ಸಾಹಿತ್ಯ ಅಧ್ಯಯನ ಕುಂಠಿತವಾಗುತ್ತಿರುವ ಸಮಯದಲ್ಲಿ ಇತಿಹಾಸ ಸಂಶೋಧಿಸಿ, ಕೃತಿ ರಚಿಸುವದರಿಂದ ನೂತನ ವಿವರಗಳು ದೊರೆಯುತ್ತವೆ ಎಂದು ಹೇಳಿದರು.
ಕೃತಿ ಬಿಡುಗಡೆ ಮಾಡಿದ ವಿಶ್ರಾಂತ ಪ್ರಾಧ್ಯಾಪಕ ಮತ್ತು ಸಾಹಿತಿ ಎಸ್.ವಿದ್ಯಾಶಂಕರ್ ಮಾತನಾಡಿ, ಕೃತಿಗಳ ಅಧ್ಯಯನದಿಂದ ಮಾತ್ರ ಲೇಖಕರ ಶ್ರಮ ಏನೆಂಬುದು ಅರ್ಥವಾಗುತ್ತದೆ. ಇತಿಹಾಸದ ಸಂಶೋಧನ ಕೃತಿಗಳನ್ನು ಓದುವುದರಿಂದ ಇತಿಹಾಸದ ಬಗ್ಗೆ ಅರಿವು ಮೂಡುತ್ತದೆ ಎಂದರು.
ಕೃತಿ ಸಂಶೋಧನೆಗೆ ಸಹಕಾರ ನೀಡಿದ ಶಾಸನ ತಜ್ಞ ಬುರುಡೆಕಟ್ಟಿ ಮಂಜಪ್ಪ, ಗುರುಸಿದ್ದಯ್ಯ, ತಳಾಸದ ಬಸವರಾಜಣ್ಣ, ರಾಘವೇಂದ್ರಾಚಾರ್, ಗಣೇಶ್ ಬಿಳಿಗಿ ಮತ್ತು ಟಿ.ಸಿ.ಬೆಟ್ಟಪ್ಪ ಅವರನ್ನು ಗೌರವಿಸಲಾಯಿತು.
ದಾವಣಗೆರೆ ಧವನ್ ಪದವಿ ಕಾಲೇಜು ಪ್ರಾಂಶುಪಾಲ ಬಾತಿ ಬಸವರಾಜ್, ನಗರಸಭೆ ಸದಸ್ಯ ಜಿ.ಸುರೇಶಗೌಡ, ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಲೇಖಕ ಡಾ.ನಾ.ಕೊಟ್ರೇಶ್ ಉತ್ತಂಗಿ, ಶಶಿಕಲಾ ಡಾ.ನಾ.ಕೊ.ಉತ್ತಂಗಿ, ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಟ್ರೇಶ್ ಉಪಸ್ಥಿತರಿದ್ದರು.
ಲೇಖಕ ಡಾ.ನಾ.ಕೊಟೇಶ್ ಉತ್ತಂಗಿ ಪ್ರಾಸ್ತಾವಿಕ ಮಾತನಾಡಿದರು. ಷಣ್ಮುಖ ಪ್ರಾರ್ಥಿಸಿದರು. ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಎ.ರಿಯಾಜ್ ಅಹಮದ್ ಸ್ವಾಗತಿಸಿದರು. ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ರೇವಣನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.