ಸಂತೇಬೆನ್ನೂರು: ಸುತ್ತಮುತ್ತಲ ಗ್ರಾಮಳ ರೈತರು ಬೆಳೆದಿರುವ ಪಾಪ್ಕಾರ್ನ್ ಬೆಳೆಗೆ ಕೇದಿಗೆ ರೋಗ ವ್ಯಾಪಕವಾಗಿದ್ದು, 1,000 ಹೆಕ್ಟೇರ್ನಷ್ಟು ಬೆಳೆ ನಾಶವಾಗಿದೆ. ಈಗಾಗಲೇ ಹಲವು ರೈತರು ಪಾಪ್ಕಾರ್ನ್ ಬೆಳೆಯನ್ನೇ ಹರಗಿ ಹೊಲ ಖಾಲಿ ಬಿಟ್ಟಿದ್ದಾರೆ.
ಎರಡು ವಾರದಿಂದ ಸುರಿಯುತ್ತಿರುವ ಸತತ ಮಳೆ, ಮೋಡ ಕವಿದ ವಾತಾವರಣದಿಂದ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿದ್ದೇ ರೋಗ ಉಲ್ಬಣಕ್ಕೆ ಕಾರಣವಾಗಿದೆ. ರೋಹಿಣಿ ಮಳೆಗೆ ಪಾಪ್ಕಾರ್ನ್ ಬಿತ್ತನೆ ಮಾಡಲಾಗಿತ್ತು. ಬೀಜ, ಗೊಬ್ಬರ, ಬೇಸಾಯ, ಕೂಲಿ, ಕಳೆನಾಶಕಕ್ಕಾಗಿ ಹೆಕ್ಟೇರ್ಗೆ ₹ 15,000ದಿಂದ ₹ 18,000 ಖರ್ಚು ಮಾಡಿರುವ ರೈತರು ನಷ್ಟಕ್ಕೀಡಾಗಿದ್ದಾರೆ.
‘ಎಲೆಗಳೆಲ್ಲಾ ಹಳದಿ ಹಾಗೂ ಬಿಳಿ ಬಣ್ಣಕ್ಕೆ ತಿರುಗಿದ್ದರಿಂದ 6 ಎಕರೆ ಬೆಳೆ ತೆರವುಗೊಳಿಸಿದ್ದೇನೆ’ ಎಂದು ಚೆನ್ನಾಪುರದ ರೈತ ಶಿವು ಹೇಳಿದರು.
ಕೊಂಡದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ 500 ಹೆಕ್ಟೇರ್ ಬೆಳೆಗೆ ಕೇದಿಗೆ ರೋಗ ತಗುಲಿದೆ ಎನ್ನುತ್ತಾರೆ ರೈತರು.
‘ಈಗಾಗಲೇ ಕೈಯಲ್ಲಿದ್ದ ಹಣವನ್ನೆಲ್ಲಾ ಕಳೆದುಕೊಂಡು ನಮ್ಮ ಬದುಕು ಹೈರಾಣಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮೀಕ್ಷೆ ನಡೆಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.
‘ಸಂತೇಬೆನ್ನೂರು ಹೋಬಳಿ ಜಿಲ್ಲೆಯಲ್ಲಿಯೇ ಪಾಪ್ಕಾರ್ನ್ ಬೆಳೆಯ ಪ್ರಮುಖ ಪ್ರದೇಶ. ಅಂದಾಜು 2,000 ಹೆಕ್ಟೇರ್ನಲ್ಲಿ ಬಿತ್ತನೆ ಆಗಿದೆ. ಅದರಲ್ಲಿ ಅಂದಾಜು 1,000 ಹೆಕ್ಟೆರ್ನಷ್ಟು ಪ್ರದೇಶದಲ್ಲಿನ ಬೆಳೆಗೆ ಕೇದಿಗೆ ರೋಗ ತಗುಲಿದೆ. ಎಲೆ ಅಡಿಯಲ್ಲಿ ನೀರಿನ ಹನಿಗಳು ಕಾಣಿಸಿ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ’ ಎಂದು ದೇವರಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕುಮಾರ್ ತಿಳಿಸಿದರು.
‘ಸತತ 24 ಗಂಟೆಯಿಂದ 48 ಗಂಟೆಗಳ ಅವಧಿವರೆಗೆ ಮೋಡ ಕವಿದು, ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾದರೆ ತೆನೆ ಒಡೆಯುವುದು ಕಷ್ಟ. ಸಂಸ್ಕರಿಸದ ಬೀಜ ಬಿತ್ತನೆಯೂ ರೋಗಕ್ಕೆ ಕಾರಣ’ ಎಂದು ಅವರು ವಿವರಿಸಿದರು.
‘ಈಗಾಗಲೇ ಯೂರಿಯಾ ತಯಾರಿಕಾ ಕಂಪನಿಗಳಿಗೆ ಕಚ್ಚಾ ವಸ್ತುಗಳು ಸಿಗದೆ ಉತ್ಪಾದನೆ ಆಗುತ್ತಿಲ್ಲ. ದೊಡ್ಡ ಮೆಕ್ಕೆಜೋಳದ ಬೆಳೆಗೆ ಗೊಬ್ಬರದ ಕೊರತೆ ಉಂಟಾಗಿದೆ. ನ್ಯಾನೊ ಯೂರಿಯಾ ಗೊಬ್ಬರ ಹಾಕಲು ಡ್ರೋನ್ ಬಳಕೆ ಮಾಡುವುದು ಸೂಕ್ತ’ ಎಂದು ದೇವರಹಳ್ಳಿ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.