ದಾವಣಗೆರೆ: ಹರಪನಹಳ್ಳಿ ತಾಲ್ಲೂಕಿನ ಯು.ಬೇವಿನಹಳ್ಳಿ ಹಾಗೂ ಗೌಳೇರಹಟ್ಟಿ ತಾಂಡಾದ ಸುತ್ತಮುತ್ತ ನಿಯಮ ಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಸಮರ ಸಾರಿರುವ ಅಧಿಕಾರಿಗಳು, 14 ಕ್ವಾರಿಗಳ ವಿರುದ್ಧ ಮಂಗಳವಾರ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದಾರೆ.
ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದ 7 ಕ್ವಾರಿ, ಹೊಸದಾಗಿ ಅರ್ಜಿ ಸಲ್ಲಿಸಿದ್ದ 4 ಕ್ವಾರಿ ಹಾಗೂ ಸಂಪೂರ್ಣವಾಗಿ ನಿಯಮ ಗಾಳಿಗೆ ತೂರಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ 3 ಕ್ವಾರಿಗಳ ವಿರುದ್ಧ ದೂರು ದಾಖಲಾಗಿದೆ. ಕಳೆದ ಕೆಲವು ವರ್ಷಗಳಿಂದ ಈ ಗ್ರಾಮಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು ಎನ್ನಲಾಗಿದೆ.
ಇದರ ಪರಿಣಾಮ ಸೋಮವಾರ ಹರಪನಹಳ್ಳಿ ಉಪ ವಿಭಾಗಧಿಕಾರಿ ಲೋಕೇಶ್ ನೇತೃತ್ವದ ಟಾಸ್ಕ್ ಫೋರ್ಸ್ ಸಮಿತಿ ದಿಢೀರ್ ದಾಳಿ ನಡೆಸಿತ್ತು. ಈ ಸಂಬಂಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲೂ ತಹಶೀಲ್ದಾರ್ ನೇತೃತ್ವದಲ್ಲಿ ಜುಲೈ 26ರಂದು ಆಲೂರುಹಟ್ಟಿ, ಕುರ್ಕಿ, ಚಟ್ಟೋಬನಹಳ್ಳಿಯ ಅನಧಿಕೃತ 15 ಕಲ್ಲು ಕ್ವಾರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಜತೆಗೆ, ಅನಧಿಕೃತ ಕ್ವಾರಿಗಳಿಗೆ ನೋಟಿಸ್ ಜಾರಿಗೆ ತಾಲ್ಲೂಕು ಆಡಳಿತ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.