ADVERTISEMENT

172 ಮಂದಿಗೆ ಕೊರೊನಾ ಸೋಂಕು: ಐವರ ಸಾವು

20 ವೃದ್ಧರು, 12 ವೃದ್ಧೆಯರು ಸಹಿತ 145 ಮಂದಿ ಗುಣಮುಖರಾಗಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 16:28 IST
Last Updated 11 ಆಗಸ್ಟ್ 2020, 16:28 IST
ಮಲೇಬೆನ್ನೂರು ಪಟ್ಟಣದ ಕೊರೊನಾ ಸೋಂಕಿತರು ಇದ್ದ ಪ್ರದೇಶವನ್ನು ಮಂಗಳವಾರ ಕಂದಾಯ, ಆರೋಗ್ಯ ಹಾಗೂ ಪುರಸಭಾ ಸಿಬ್ಬಂದಿ ಸೀಲ್‌ಡೌನ್ ಮಾಡಿದರು
ಮಲೇಬೆನ್ನೂರು ಪಟ್ಟಣದ ಕೊರೊನಾ ಸೋಂಕಿತರು ಇದ್ದ ಪ್ರದೇಶವನ್ನು ಮಂಗಳವಾರ ಕಂದಾಯ, ಆರೋಗ್ಯ ಹಾಗೂ ಪುರಸಭಾ ಸಿಬ್ಬಂದಿ ಸೀಲ್‌ಡೌನ್ ಮಾಡಿದರು   

ದಾವಣಗೆರೆ: ಜಿಲ್ಲೆಯಲ್ಲಿ 172 ಮಂದಿಗೆ ಕೊರೊನಾ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದೆ. ಐವರು ಮೃತಪಟ್ಟಿದ್ದಾರೆ.

ಉಸಿರಾಟದ ಸಮಸ್ಯೆ ಇದ್ದ ವಿನೋಬನಗರದ 53 ವರ್ಷದ ಪುರುಷ ಸೋಮವಾರ ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆ ಮತ್ತು ಮಧುಮೇಹ ಇದ್ದ ಎಂಸಿಸಿ ಬಿ ಬ್ಲಾಕ್‌ನ 62 ವರ್ಷದ ವೃದ್ಧೆ, ಬಸವರಾಜಪೇಟೆಯ 48 ವರ್ಷದ ಪುರುಷ ಸೋಮವಾರ ಮೃತಪಟ್ಟಿದ್ದಾರೆ. ವಿನೋಬನಗರದ 70 ವರ್ಷದ ವೃದ್ಧೆ ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಮಂಗಳವಾರ ನಿಧನರಾದರು. ಪಿಜೆ ಬಡಾವಣೆಯ 71 ವರ್ಷದ ವೃದ್ಧ ಮಂಗಳವಾರ ಮೃತಪಟ್ಟಿದ್ದಾರೆ. ಅವರಿಗೆ ಉಸಿರಾಟದ ಸಮಸ್ಯೆಯ ಜತೆಗೆ ಅಧಿಕ ರಕ್ತದೊತ್ತಡ, ಮಧುಮೇಹ ಇತ್ತು. ಈ ಎಲ್ಲರಿಗೂ ಕೊರೊನಾ ಸೋಂಕು ಇದ್ದಿದ್ದು ದೃಢಪಟ್ಟಿದೆ.

28 ಹಿರಿಯರಿಗೆ ಸೋಂಕು: 16 ಮಂದಿ ವೃದ್ಧರಿಗೆ, 12 ಮಂದಿ ವೃದ್ಧೆಯರಿಗೆ ಸೋಂಕು ಇರುವುದು ಖಚಿತವಾಗಿದೆ. ನಾಲ್ವರು ಬಾಲಕರು, 8 ಬಾಲಕಿಯರಿಗೂ ಕೊರೊನಾ ಬಂದಿದೆ. 18ರಿಂದ 59 ವರ್ಷದವರೆಗಿನ 83 ಪುರುಷರಿಗೆ, 49 ಮಹಿಳೆಯರಿಗೆ ಸೋಂಕು ತಗುಲಿದೆ.

ADVERTISEMENT

ದಾವಣಗೆರೆ ತಾಲ್ಲೂಕಿನ 81 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ ದೊಡ್ಡಬಾತಿ, ಲೋಕಿಕೆರೆ, ಕುರ್ಕಿ, ಹೂವಿನಮಡು, ಕಕ್ಕರಗೊಳ್ಳ, ಸಿಂಗ್ರಿಹಳ್ಳಿ ಮುಂತಾದ ಗ್ರಾಮೀಣ ಭಾಗದ 9 ಮಂದಿಯನ್ನು ಹೊರತುಪಡಿಸಿದರೆ ಉಳಿದ ಎಲ್ಲರೂ ಮಹಾನಗರ ಪಾಲಿಕೆ ವ್ಯಾಪ್ತಿಯವರಾಗಿದ್ದಾರೆ. ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿದ್ದ 10 ಮಂದಿಗೆ ಕೊರೊನಾ ಬಂದಿದೆ. ಪೊಲೀಸ್‌ ಕ್ವಾರ್ಟರ್ಸ್‌ನ ಇಬ್ಬರು, ಕೆಎಸ್‌ಆರ್‌ಟಿಸಿ ಡಿಪೊದ ಒಬ್ಬ ಸಿಬ್ಬಂದಿ, ಜೆಜೆಎಂ ಮೆಡಿಕಲ್‌ ಕಾಲೇಜಿನ ಪಿಜಿ ವಿದ್ಯಾರ್ಥಿಯೊಬ್ಬರಿಗೂ ಕೊರೊನಾ ಇರುವುದು ಪತ್ತೆಯಾಗಿದೆ.

ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 36 ಮಂದಿಗೆ, ಚನ್ನಗಿರಿ ತಾಲ್ಲೂಕಿನ 29 ಮಂದಿಗೆ, ಹರಿಹರ ತಾಲ್ಲೂಕಿನ 23 ಮಂದಿಗೆ, ಜಗಳೂರಿನ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಮತ್ತು ಕೊಟ್ಟೂರಿನ ತಲಾ ಒಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.

145 ಮಂದಿ ಬಿಡುಗಡೆ: 20 ವೃದ್ಧರು, 12 ವೃದ್ಧೆಯರು ಸೇರಿದಂತೆ 145 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅದರಲ್ಲಿ 90 ವರ್ಷದ ಇಬ್ಬರು, 80 ವರ್ಷ ದಾಟಿದ ಮೂವರು ಒಳಗೊಂಡಿದ್ದಾರೆ. ತಲಾ ಒಂದು ವರ್ಷದ ಒಂದು ಹೆಣ್ಣು ಮಗು, ಒಂದು ಗಂಡು ಮಗು ಸೇರಿ 8 ಬಾಲಕರು, ಐವರು ಬಾಲಕಿಯರೂ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 3830 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ 2478 ಮಂದಿ ಗುಣಮುಖರಾಗಿದ್ದಾರೆ. 105 ಮಂದಿ ಮೃತಪಟ್ಟಿದ್ದಾರೆ. 1247 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 27 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.