ದಾವಣಗೆರೆ: ನಗರ ಸೇರಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದ್ದು, ಬುಧವಾರ ಬೆಳಿಗ್ಗೆ ಹಾಗೂ ಮಧ್ಯಾಹ್ನ ಮಳೆ ಸುರಿಯಿತು. ಕೆಲವು ಸಮಯ ಬಿಟ್ಟರೆ ಮುಂಜಾನೆಯಿಂದ ರಾತ್ರಿಯವರೆಗೂ ಮೋಡ ಕವಿದ ವಾತಾವರಣವಿತ್ತು.
ಜಿಲ್ಲೆಯಲ್ಲಿ ಮಂಗಳವಾರ 3.6 ಸೆಂಟಿ ಮೀಟರ್ ಸರಾಸರಿ ಮಳೆಯಾಗಿದ್ದು, ಮನೆ, ಬೆಳೆ ಸೇರಿ ಒಟ್ಟು ₹23.55 ಲಕ್ಷ ನಷ್ಟವಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ದಾವಣಗೆರೆ ನಗರದ ಮಟ್ಟಿಕಲ್ ಸ್ಲಂನಲ್ಲಿ 16 ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ನೀರನ್ನು ಹೊರಹಾಕಲು ಮಹಿಳೆಯರು ಹರಸಾಹಸ ಪಡಬೇಕಾಯಿತು. ಕೆ.ಆರ್.ರಸ್ತೆಯ ಮುದ್ದೇಗೌಡ ಸ್ಕೂಲ್ ಬಳಿ ಬುಧವಾರ ಸುರಿದ ಮಳೆಯಿಂದ ಮರದ ದೊಡ್ಡ ರೆಂಬೆಯೊಂದು ಮುರಿದು ಬಿದ್ದಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
ದಾವಣಗೆರೆ ತಾಲೂಕು ಮಾಗಾನಹಳ್ಳಿ, ಅರಸಾಪುರ, ಕಡ್ಲೇಬಾಳು, ದೊಡ್ಡ ಓಬಜ್ಜಿಹಳ್ಳಿ, ಕೋಡಿ ಕ್ಯಾಂಪ್, ಅಮೃತನಗರ, ಬದಿಯನಾಯ್ಕನ ತಾಂಡಾ, ಹಳೇ ಕಡ್ಲೇಬಾಳು ಗ್ರಾಮಗಳಲ್ಲಿ ನೂರಾರು ಎಕರೆ ಭತ್ತದ ಬೆಳೆಯು ನೆಲ ಕಚ್ಚಿದೆ. ಅಣಬೇರು, ಎಲೆಬೇತೂರು ಗ್ರಾಮಗಳಲ್ಲಿಮನೆಗಳಿಗೆ ನೀರು ನುಗ್ಗಿದ್ದು, ಕುಟುಂಬದವರು ಮನೆಯ ಹೊರಗಡೆ ಕಾಲ
ಕಳೆಯಬೇಕಾಯಿತು.
ದಾವಣಗೆರೆ ತಾಲ್ಲೂಕಿನ ಲೋಕಿಕೆರೆಯಲ್ಲಿ 18, ಅಣಜಿಯಲ್ಲಿ 1, ಕಸಬಾ ಹೋಬಳಿಯಲ್ಲಿ 2, ಆನಗೋಡಿನಲ್ಲಿ 8, ಮಾಯಕೊಂಡದಲ್ಲಿ 7 ಮನೆಗಳಿಗೆ ಹಾನಿಯಾಗಿದ್ದು,36 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ₹8.75 ಲಕ್ಷ, 30 ಎಕರೆ ಭತ್ತ ಮತ್ತು ಮೆಕ್ಕೆಜೋಳ ಹಾನಿಯಾಗಿದ್ದು, ₹1.30 ಲಕ್ಷ ಸೇರಿ ಒಟ್ಟು ₹10.05 ಲಕ್ಷ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.