ದಾವಣಗೆರೆ: ಜಿಲ್ಲೆಯಲ್ಲಿ 18 ವೃದ್ಧರು, 8 ವೃದ್ಧೆಯರು, 10 ಬಾಲಕರು, 14 ಬಾಲಕಿಯರು ಸೇರಿ 239 ಮಂದಿಗೆ ಕೊರೊನಾ ಇರುವುದು ಬುಧವಾರ ದೃಢಪಟ್ಟಿದೆ. ಆರು ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ ನಾಲ್ಕು ಸಾವಿರ ದಾಟಿದೆ.
ಉಸಿರಾಟದ ಸಮಸ್ಯೆ, ಅಧಿಕ ರಕ್ತದೊತ್ತಡದಿಂದ ಶಿವಾಜಿನಗರದ 70 ವರ್ಷದ ವೃದ್ಧ ಬುಧವಾರ ಮತ್ತು ಅಣಜಿಯ 48 ವರ್ಷದ ಪುರುಷ ಮಂಗಳವಾರ ಮೃತಪಟ್ಟಿದ್ದಾರೆ.
ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಉಸಿರಾಟದ ಸಮಸ್ಯೆ ಇದ್ದ ದೊಡ್ಡಬಾತಿಯ 69 ವರ್ಷದ ವೃದ್ಧ, ಅಧಿಕ ರಕ್ತದೊತ್ತಡ,ಹೃದಯ ಸಂಬಂಧಿ ಕಾಯಿಲೆ, ಉಸಿರಾಟದ ಸಮಸ್ಯೆಯಿಂದ ಕುಣಿಬೆಳೆಕೆರೆಯ 65 ವರ್ಷದ ವೃದ್ಧ ಆ.9ರಂದು ನಿಧನರಾಗಿದ್ದಾರೆ.
ಹರಿಹರ ತಾಲ್ಲೂಕಿನ ಬನ್ನಿಕೋಡಿನ 37 ವರ್ಷದ ಪುರುಷ ಆ.9ರಂದು ಹಾಗೂ ಹಾವೇರಿ ಜಿಲ್ಲೆಯ ಮಾಸೂರಿನ 66 ವರ್ಷದ ವೃದ್ಧ ಆ.10ರಂದು ಮೃತಪಟ್ಟಿದ್ದಾರೆ. ಇಬ್ಬರಿಗೂ ಉಸಿರಾಟದ ಸಮಸ್ಯೆ ಇತ್ತು.
17ರಿಂದ 59 ವರ್ಷದ ವರೆಗಿನ 116 ಪುರುಷರು ಮತ್ತು 73 ಮಹಿಳೆಯರಿಗೆ ಕೊರೊನಾ ಇರುವುದು ಖಚಿತವಾಗಿದೆ.
ಅತಿ ಹೆಚ್ಚು ಅಂದರೆ 163 ಪ್ರಕರಣಗಳು ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲೇ ದಾಖಲಾಗಿವೆ. ಕಕ್ಕರಗೊಳ್ಳದ ಆರು ಮಂದಿ, ದೊಡ್ಡಬಾತಿಯ ಐವರು, ಕುರ್ಕಿ, ಗುಡಾಳ್, ಕೊಂಡಜ್ಜಿ, ತೋಳಹುಣಸೆಯ ತಲಾ ಒಬ್ಬರು ಹೀಗೆ 15 ಮಂದಿ ಗ್ರಾಮೀಣ ಪ್ರದೇಶದವರಾಗಿದ್ದಾರೆ. ಉಳಿದ 148 ಮಂದಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯವರಾಗಿದ್ದಾರೆ. ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ನಲ್ಲಿದ್ದ 13 ಮಂದಿಗೆ ಸೋಂಕು ತಗುಲಿದೆ. ಎಸ್ಎಂಕೆ ನಗರದ 18 ಮಂದಿಗೆ, ಗಾಂಧಿನಗರದ 16 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ನಿಟುವಳ್ಳಿ, ಬಂಬೂಬಜಾರ್ ಮುಂತಾದ ಕೆಲವು ಪ್ರದೇಶಗಳಲ್ಲಿ 5ಕ್ಕಿಂತ ಅಧಿಕ ಪ್ರಕರಣಗಳಿವೆ. ಬೇರೆ ಬೇರೆ ಕಾಯಿಲೆಯ ಚಿಕಿತ್ಸೆಗಾಗಿ ದಾವಣಗೆರೆಗೆ ಬಂದಿರುವ ಬಳ್ಳಾರಿ ಜಿಲ್ಲೆಯ ರಾಣೆಬೆನ್ನೂರು, ಉಚ್ಚಂಗಿದುರ್ಗ, ಚಿತ್ರದುರ್ಗದ ದೊಡ್ಡಪೇಟೆಯ ಮೂವರಿಗೆ ಕೊರೊನಾ ಇರುವುದು ದೃಢಪಟ್ಟಿವೆ.
ಹರಿಹರ ತಾಲ್ಲೂಕಿನಲ್ಲಿ 39, ಚನ್ನಗಿರಿ ತಾಲ್ಲೂಕಿನಲ್ಲಿ 19, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳಲ್ಲಿ 8, ಜಗಳೂರು ತಾಲ್ಲೂಕಿನಲ್ಲಿ 7 ಮಂದಿಗೆ ಕೊರೊನಾ ಇರುವುದು ಖಚಿತವಾಗಿದೆ.
ಗುಣಮುಖರಾಗಿ ಬುಧವಾರ 170 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅದರಲ್ಲಿ 90 ವರ್ಷದವರೂ ಸೇರಿ 27 ವೃದ್ಧೆಯರು, 24 ವೃದ್ಧರು, ಇಬ್ಬರು ಬಾಲಕರು, ಮೂವರು ಬಾಲಕಿಯರು ಸೇರಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 4069 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 2648 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 111 ಮಂದಿ ಮೃತಪಟ್ಟಿದ್ದಾರೆ. 1310 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 27 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.