ADVERTISEMENT

‘ಕೊನೆ ಭಾಗದ ರೈತರಿಗೆ ನಾಲೆ ನೀರು ತಲುಪಿಲ್ಲ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 8:55 IST
Last Updated 26 ಜನವರಿ 2018, 8:55 IST

ದಾವಣಗೆರೆ: ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿಸಿ 20 ದಿನಗಳಾದರೂ ಕೊನೆಭಾಗದ ರೈತರಿಗೆ ನೀರು ತಲುಪಿಲ್ಲ ಎಂದು ಭಾರತೀಯ ರೈತ ಒಕ್ಕೂಟದ ಬಿ.ಎಂ.ಸತೀಶ್‌ ದೂರಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭದ್ರಾ ನಾಲೆಯುದ್ದಕ್ಕೂ ಅಳವಡಿಸಿರುವ ಅಕ್ರಮ ಪಂಪ್‌ಸೆಟ್‌ಗಳಿಂದಾಗಿ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ನೀರಾವರಿ ಮತ್ತು ಬೆಸ್ಕಾಂ ಅಧಿಕಾರಿಗಳು ನೆಪ ಮಾತ್ರಕ್ಕೆ ಅಕ್ರಮ ಪಂಪ್‌ಸೆಟ್‌ ತೆರವುಗೊಳಿಸುವ ಕಾರ್ಯಚರಣೆ ಮಾಡುತ್ತಿದ್ದಾರೆ. ಪಂಪ್‌ಸೆಟ್‌ ಅಳವಡಿಸಿ ಕೊಂಡಿರುವವರ ವಿರುದ್ಧ ಪ್ರಕರಣ ದಾಖಲಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಅಕ್ರಮ ಪಂಪ್‌ಸೆಟ್‌ ಅಳವಡಿಸಿಕೊಳ್ಳಲು ಬೆಸ್ಕಾಂ ಅಧಿಕಾರಿಗಳು ಅನಧಿಕೃತವಾಗಿ ವಿದ್ಯುತ್‌ ಪೂರೈಕೆ ಮಾಡಿರುವುದೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಕೆಲ ರಾಜಕೀಯ ಪ್ರಭಾವಿಗಳು ಹಾಗೂ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದು, ಅವರಿಂದಲೇ ಹೆಚ್ಚಿನ ನೀರು ಕಳವಾಗುತ್ತಿದೆ’ ಎಂದು ಅವರು ಆರೋಪಿಸಿದರು.

ADVERTISEMENT

ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ವ್ಯಕ್ತಿಗಳ ವಿರುದ್ಧ ಬೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

2– 3 ದಿನದೊಳಗೆ ಕೊನೆಭಾಗದ ರೈತರಿಗೆ ನೀರು ಸಿಗದಿದ್ದರೆ, ಅದೇ ಭಾಗದ ರೈತರೊಂದಿಗೆ ಸೇರಿಕೊಂಡು ರಸ್ತೆತಡೆ, ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಬಿ.ನಾಗೇಶ್ವರರಾವ್‌, ಎಚ್‌.ಎಂ.ಗುರುನಾಥ, ಆರನೇಕಲ್ಲು ವಿಜಯಕುಮಾರ್, ತುರ್ಚಘಟ್ಟದ ಪುಟ್ಟರಾಜ್‌, ಎನ್‌.ಟಿ.ರಾಜು, ಹನುಮಂತಪ್ಪ, ದೊಡ್ಡ ರಂಗಪ್ಪ ಅವರೂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.