ಹೊನ್ನಾಳಿ: ಶಿಕಾರಿಪುರ–ಹೊನ್ನಾಳಿ ರಸ್ತೆಯಿಂದ ಮಾದೇನಹಳ್ಳಿಗೆ ಹೋಗುವ ಒಳ ರಸ್ತೆಯಲ್ಲಿರುವ ಗುಮ್ಮಿಹಳ್ಳದ ಸೇತುವೆ ನಿರ್ಮಾಣಕ್ಕೆ ನಬಾರ್ಡ್ ಯೋಜನೆಯಡಿ ₹ 50 ಲಕ್ಷ ಅನುದಾನ ಮಂಜೂರಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು. ಭಾನುವಾರ ತಾಲ್ಲೂಕಿನ ಮಾದೇನಹಳ್ಳಿಯಲ್ಲಿ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಂಚಾಯತ್ ರಾಜ್ ಇಲಾಖೆ ಉಪ ವಿಭಾಗ ಇದರ ಉಸ್ತುವಾರಿ ಹೊತ್ತಿದ್ದು, ಇದಕ್ಕೆ ಸಂಬಂಧಪಟ್ಟ ಎಂಜಿನಿಯರ್ ಹಾಗೂ ಗುತ್ತಿಗೆದಾರರು ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳುವತ್ತ ಗಮನನೀಡಬೇಕು. ಕಾಮಗಾರಿ ಕಳಪೆ ಎಂದು ಕಂಡುಬಂದರೆ ಗುತ್ತಿಗೆದಾರರಿಗೆ ಪಾವತಿಸಬೇಕಾದ ಹಣವನ್ನು ತಡೆಹಿಡಿಯಲಾಗುವುದು ಎಂದು ಎಚ್ಚರಿಸಿದರು.
ಈ ಭಾಗದಲ್ಲಿ ಓಡಾಡುವ ಗ್ರಾಮಸ್ಥರು, ರೈತರು ಕೂಡ ಈ ಬಗ್ಗೆ ನಿಗಾವಹಿಸಬೇಕು. ಸುರಕ್ಷಿತವಾಗಿ, ಸುಸ್ಸಜ್ಜಿತವಾಗಿರಬೇಕಾದ ಸೇತುವೆ ಕಳಪೆಯಾದರೆ ಅನಾಹುತ ತಪ್ಪಿದ್ದಲ್ಲ. ಈ ಬಗ್ಗೆ ಎಂಜಿನಿಯರ್ಗಳು ಜಾಗೃತರಾಗಿರಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಆರ್.ಮಹೇಶ್, ತಾಲ್ಲೂಕು ಪಂಚಾಯ್ತಿ ಸದಸ್ಯೆ ಗಿರಜಮ್ಮ, ಗ್ರಾಮ ಪಂಚಾಯ್ತಿ ಸದಸ್ಯರಾದ ಕೆ.ಇ.ನಾಗರಾಜ್, ಕೆ.ಎಚ್.ನಾಗರಾಜ್, ಬಸವಣ್ಯಪ್ಪ, ಎಪಿಎಂಸಿ ಅಧ್ಯಕ್ಷ ಸೋಮಶೇಖರ್, ಜಗದೀಶ್, ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಜಿಲ್ಲಾ ಪಂಚಾಯ್ತಿ ಎಇಇ ಮಂಜುನಾಥ್ ಕಪಾಳಿ, ಗುತ್ತಿಗೆದಾರ ಪಿ.ಆರ್.ಮಂಜುನಾಥ್, ಗ್ರಾಮಸ್ಥರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.