
ಚನ್ನಗಿರಿ: ಭಾವಸಾರ ಕ್ಷತ್ರಿಯ ದೈವ ಮಂಡಳಿ, ಮಹಿಳಾ ಭಜನಾ ಮಂಡಳಿ ಹಾಗೂ ಯುವಕ ಮಂಡಳಿಯ ಸಹಯೋಗದಲ್ಲಿ ಪಟ್ಟಣದಲ್ಲಿ 82ನೇ ವರ್ಷದ ದಿಂಡಿ ಮಹೋತ್ಸವ ಕಾರ್ಯಕ್ರಮ ಮಂಗಳವಾರ ಅದ್ದೂರಿಯಾಗಿ ನಡೆಯಿತು.
ದಿಂಡಿ ಎಂದರೆ ವೀಣೆ. ಸತ್ಸಂಗದಲ್ಲಿದ್ದು, ಭಗವಂತನ ಭಜನೆ, ಕೀರ್ತನೆ ಹಾಗೂ ಪ್ರವಚನ ಮಾಡುವ ಮೂಲಕ ಜನ್ಮದ ಸಾರ್ಥಕತೆ ಮಾಡಿಕೊಳ್ಳುವ ಧಾರ್ಮಿಕ ಸಮಾರಂಭವೇ ದಿಂಡಿ ಮಹೋತ್ಸವ. ಪಂಡರಿ ಸಂಪ್ರದಾಯದಂತೆ ಈ ದಿಂಡಿ ಮಹೋತ್ಸವವನ್ನು ಪ್ರತಿ ವರ್ಷ ಪಟ್ಟಣದಲ್ಲಿ ಆಚರಿಸಲಾಗುತ್ತದೆ.
82ನೇ ವರ್ಷದ ದಿಂಡಿ ಮಹೋತ್ಸವದ ಅಂಗವಾಗಿ ಪಟ್ಟಣದ ವಿಠ್ಠಲ ರುಕುಮಾಯಿ ದೇವಸ್ಥಾನದಿಂದ ಹೊರಟ ಮೆರವಣಿಗೆಯು ತಾಳ, ಮೃದಂಗ, ವೀಣೆ, ಬಾಳಗೋಪಾಳ ಹಾಗೂ ಭಜನೆಯೊಂದಿಗೆ ಪಾಂಡುರಂಗ ವಿಠ್ಠಲನನ್ನು ಸ್ತುತಿಸುತ್ತ ಪ್ರಮುಖ ಬೀದಿಗಳಲ್ಲಿ ಸಾಗಿತು.
ಈ ದಿಂಡಿ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ನಡೆದವು. ಮೆರವಣಿಗೆಯ ನಂತರ ಹನುಮಂತರಾವ್ ರಂಗದೋಳ್ ಅವರು ಕಾಲಾ ಕೀರ್ತನೆ ಕಾರ್ಯಕ್ರಮ ನಡೆಸಿಕೊಟ್ಟರು. ಕೀರ್ತನೆಯ ನಂತರ ಭಾವಸಾರ ಕ್ಷತ್ರಿಯ ಸಮಾಜದವರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಸಮಾಜದ ಅಧ್ಯಕ್ಷ ಜಿ.ಪಿ.ರವಿಕುಮಾರ್, ಗೌರವಾಧ್ಯಕ್ಷ ಕೆ.ಟಿ. ಮಂಜುನಾಥರಾವ್, ಉಪಾಧ್ಯಕ್ಷ ಜಿ.ಎಂ. ರಘು, ಕಾರ್ಯದರ್ಶಿ ಬಿ.ಕೆ.ಎಂ. ರವಿಕುಮಾರ್, ಖಜಾಂಚಿ ಜಿ.ಆರ್. ರಾಘವೇಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.