ADVERTISEMENT

ಪ್ರಧಾನಿಗೆ ರಕ್ತದಲ್ಲಿ ಪತ್ರಬರೆದ ಯುವ ಕಾಂಗ್ರೆಸ್‌

ಕೇಂದ್ರದ ನೀತಿಯಿಂದ ನಿರುದ್ಯೋಗ ಸಮಸ್ಯೆ ಹೆಚ್ಚಳ: ಆರೋಪ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 7:49 IST
Last Updated 16 ಸೆಪ್ಟೆಂಬರ್ 2021, 7:49 IST
ದಾವಣಗೆರೆ ಯುವಕಾಂಗ್ರೆಸ್‌ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಪ್ರತಿಭಟನೆ ನಡೆಸಲಾಯಿತು
ದಾವಣಗೆರೆ ಯುವಕಾಂಗ್ರೆಸ್‌ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಪ್ರತಿಭಟನೆ ನಡೆಸಲಾಯಿತು   

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಸೆ.17ರಂದು ಇದೆ. ಈ ದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸಲು ನಿರ್ಧರಿಸಿರುವ ಯುವಕಾಂಗ್ರೆಸ್‌ ಬುಧವಾರ ಹುಟ್ಟುಹಬ್ಬದ ಶುಭಾಶಯ ಕೋರಿ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಪ್ರತಿಭಟನೆ ನಡೆಸಿತು.

ಯುವಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ನೇತೃತ್ವದಲ್ಲಿ ನಗರದ ಕೇಂದ್ರ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಸೈಯದ್ ಖಾಲಿದ್ ಮಾತನಾಡಿ, ‘ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣಾ ಸಮಯದಲ್ಲಿ ಭರವಸೆ ನೀಡಿದ್ದರು. ಅದರಂತೆ 14 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಇರುವ ಉದ್ಯೋಗವನ್ನೂ ಕಿತ್ತುಕೊಂಡು ಯುವಜನರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಅದನ್ನು ಪ್ರತಿಭಟಿಸಿ ರಕ್ತಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ADVERTISEMENT

ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ‘ಮೋದಿ ದೇಶದ ಜನರಿಗಾಗಿ ಆಡಳಿತ ನಡೆಸುತ್ತಿಲ್ಲ ಅದರ ಬದಲಾಗಿ ಅದಾನಿ, ಅಂಬಾನಿ ಎಂಬ ಇಬ್ಬರು ಉದ್ಯಮಿಗಳಿಗಾಗಿ ಅಧಿಕಾರ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಕಟ್ಟಿದ ದೇಶದ ಸಂಪತ್ತನ್ನು ಮೋದಿ ಮಾರಾಟ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ ಮುಖಂಡರಾದ ಅಯೂಬ್ ಪೈಲ್ವಾನ್, ಮಂಜುನಾಥ್, ಮೊಹಮ್ಮದ್ ಜಿಕ್ರಿಯಾ, ಹರೀಶ್ ಕೆ.ಎಲ್., ವಿನಯ್, ನವೀನ್ ನಾಲವಾಡಿ, ಶಶಿಧರ್ ಪಾಟೀಲ್, ಮಹಬೂಬ್ ಬಾಷಾ, ರಾಘವೇಂದ್ರ ಗೌಡ, ಅಣ್ಣೇಶ್, ದೀಪಕ್, ಶಮಿ ದೇವರಹಟ್ಟಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.