ADVERTISEMENT

ಬಸವಣ್ಣನ ವಚನಗಳಲ್ಲಿ ಅಳವಡಿಸಿಕೊಳ್ಳಿ

ವಿಮರ್ಶಕ ಡಾ.ಬಸವರಾಜ ಕಲ್ಗುಡಿ

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:00 IST
Last Updated 7 ಮೇ 2019, 20:00 IST
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿಮರ್ಶಕ ಪ್ರೊ.ಬಸವರಾಜ ಕಲ್ಗುಡಿ ಅವರನ್ನು ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಎಸ್.ವಿ.ಹಲಸೆ ಸನ್ಮಾನಿಸಿದರು
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿಮರ್ಶಕ ಪ್ರೊ.ಬಸವರಾಜ ಕಲ್ಗುಡಿ ಅವರನ್ನು ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಎಸ್.ವಿ.ಹಲಸೆ ಸನ್ಮಾನಿಸಿದರು   

ದಾವಣಗೆರೆ: ಬಸವಣ್ಣನವರನ್ನು ಪ್ರತಿಮೆಯನ್ನಾಗಿ ಕಾಣುವ ಬದಲು ಅವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವಚನ ಸಾಹಿತ್ಯದ ಆಶಯಗಳು ಈಡೇರುತ್ತವೆ ಎಂದು ವಿಮರ್ಶಕ ಡಾ. ಬಸವರಾಜ ಕಲ್ಗುಡಿ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ 886ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ದೂರದೃಷ್ಟಿಯ, ವಿಶ್ವವೈಶಾಲ್ಯದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ 12ನೇ ಶತಮಾನದಲ್ಲಿ ಅವರು ಕಂಡ ಕನಸು ನನಸಾಗುವುದು. ಶ್ರೇಣಿಕೃತ ಸಮಾಜದ ವ್ಯವಸ್ಥೆಯನ್ನು ಖಂಡಿಸಿ ಅದನ್ನು ದೂರಗೊಳಿಸುವ ಪ್ರಯತ್ನಗಳು ವಚನ ಸಾಹಿತ್ಯದ ಕಾಲಘಟ್ಟದಲ್ಲಿ ನಡೆದಿತ್ತು. ಆದರೆ, ಇಂದು ಸಮಾಜದಲ್ಲಿ ಅವರ ವಿಚಾರಗಳನ್ನು, ತತ್ವಗಳನ್ನು ಹಾಗೂ ಭಾವಚಿತ್ರವನ್ನು ಎತ್ತಿ ಹಿಡಿಯುವ ಕೆಲಸವಾಗುತ್ತಿದೆಯೇ ಹೊರತು ಅವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಮಹಾಮನೆ, ಅನುಭವ ಮಂಟಪ ಇವುಗಳೆಲ್ಲವೂ 12ನೇ ಶತಮಾನದಲ್ಲಿದ್ದ ಸ್ಥಳಗಳಷ್ಟೇ ಅಲ್ಲ. ನಮ್ಮ ಬದುಕನ್ನು ಪರಿವರ್ತಿಸುವ ಪ್ರತಿಮೆಗಳು. ಬುದ್ಧ, ಬಸವ, ಅಂಬೇಡ್ಕರ್‌ ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಪರಿವರ್ತನೆಯಗಲು ಸಾಧ್ಯ. ವಚನಕಾರರು ದೇಹವೇ ದೇಗುಲ ಎಂಬ ಪರಮಾರ್ಥವನ್ನು ಬಹು ಮುಖ್ಯವೆಂದು ತಿಳಿದುಕೊಂಡರು. ಅವರ ಅರಿವಿನ ಅಂತಃಸತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕರೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ವಿ.ಹಲಸೆ, ‘ಬಸವಣ್ಣನವರ ಫೋಟೋಗಳನ್ನು ಎತ್ತಿ ಹಿಡಿಯುವುದಕ್ಕಿಂತಲೂ ಅವರ ತತ್ವಗಳನ್ನು ಅಪ್ಪಿಕೊಳ್ಳಬೇಕು. ಬಸವಣ್ಣನವರು ಸಂದರ್ಭಕ್ಕನುಗುಣವಾಗಿ ವಚನಗಳನ್ನು ಹೇಳಿದ್ದಾರೆ. ಇಂದಿನ ಪ್ರಜಾಪ್ರಭುತ್ವದ ಕಲ್ಪನೆಯೂ ತಮಾನದ ಬಸವಣ್ಣನವರ ಕಲ್ಯಾಣ ಮಂಟಪದ ಆಶಯವಾಗಿತ್ತು. ‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ತತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.

ಕುಲಸಚಿವ ಪ್ರೊ.ಪಿ.ಕಣ್ಣನ್, ‘ಪ್ರಸ್ತುತ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ಶೋಷಣೆಗಳು ಆಗುತ್ತಿವೆ. ಈ ಏರು ಪೇರುಗಳನ್ನು ಸಮಾನವಾಗಿ ಕಾಣಲು ಬಹು ಮುಖ್ಯವಾಗಿ ಹೋರಾಟ ಮಾಡಿದವರಲ್ಲಿ ಬಸವಣ್ಣ ಪ್ರಮುಖರು. ಇಂದು ವಿದ್ಯಾರ್ಥಿಗಳು ಪದವಿಗಾಗಿ ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ವಿನಃ ಅದರಾಚೆಗೆ ಜ್ಞಾನವನ್ನು ಪಡೆದುಕೊಂಡು ತಮ್ಮ ಅನಿಸಿಕೆಗಳನ್ನು ಬರಹದ ಮೂಲಕ ವ್ಯಕ್ತಪಡಿಸುವ ಕಾರ್ಯವಾಗುತ್ತಿಲ್ಲ. ನುಡಿದಂತೆ ನಡೆಯುವ ಬಸವಣ್ಣನವರ ಕಾಯಕ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಸಚಿವ ಪ್ರೊ. ಬಸವರಾಜ್ ಬಣಕಾರ ಮತ್ತು ಹಣಕಾಸು ಅಧಿಕಾರಿ ಪ್ರೊ.ಜೆ.ಕೆ. ರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.