ADVERTISEMENT

ರೈತರಿಗೆ ಸಾಲ ನೀಡಿ ಕೃಷಿ ಅಭಿವೃದ್ಧಿಗೆ ಸಹಕರಿ: ಸಂಸದೆ ಡಾ.ಪ್ರಭಾ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 4:53 IST
Last Updated 11 ನವೆಂಬರ್ 2025, 4:53 IST
ಬಸವಾಪಟ್ಟಣ ಸಮೀಪದ ದಾಗಿನಕಟ್ಟೆಯಲ್ಲಿ ಸೋಮವಾರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ರವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು
ಬಸವಾಪಟ್ಟಣ ಸಮೀಪದ ದಾಗಿನಕಟ್ಟೆಯಲ್ಲಿ ಸೋಮವಾರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ರವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು   

ಬಸವಾಪಟ್ಟಣ: ‘ಗ್ರಾಮೀಣ ಕೃಷಿ ಅಭಿವೃದ್ಧಿಗಾಗಿ ರಾಜ್ಯದಾದ್ಯಾಂತ ಸ್ಥಾಪನೆಗೊಂಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಎಲ್ಲಾ ವರ್ಗದ ರೈತರಿಗೆ ಸಾಲ ನೀಡಿ ಕೃಷಿ ಅಭಿವೃದ್ಧಿಗೆ ಸಹಕರಿಸಿ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.

ಅವರು ಸಮೀಪದ ದಾಗಿನಕಟ್ಟೆಯಲ್ಲಿ ನಿರ್ಮಾಣ ವಾಗಲಿರುವ 92 ಲಕ್ಷರೂ ವೆಚ್ಚದ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಬಹುಪಾಲು ರೈತರು ತಮ್ಮ ಗ್ರಾಮಗಳ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಪ್ರತಿ ವರ್ಷ ಸಾಲ ಪಡೆದು ಕೃಷಿ ಚಟುವಟಿಕೆಗಳನ್ನು ಆರಂಭಿಸುತ್ತಾರೆ. ರಾಜ್ಯ ಸರ್ಕಾರ ಶೇಕಡ ಶೂನ್ಯ ಬಡ್ಡಿಯ ಆಧಾರದಲ್ಲಿ ರೈತರಿಗೆ ಸಾಲ ನೀಡಿ ಸಹಕರಿಸುತ್ತಿದೆ. ಈಭಾಗದಲ್ಲಿ ಈಗ ಹೆಚ್ಚಾಗಿ ಅಡಿಕೆ, ಮೆಕ್ಕೆ ಜೋಳ ಮತ್ತು ಭತ್ತ ಪ್ರಮುಖ ಬೆಳೆಯಾಗಿದ್ದು, ಸಹಕಾರ ಸಂಘಗಳು ನಿಗದಿತ ಸಮಯಕ್ಕೆ ರೈತರಿಗೆ ಸಾಲ ನೀಡಿದಲ್ಲಿ ನೆಮ್ಮದಿಯಿಂದ ಫಸಲಿನ ಉತ್ಪಾದನೆ ಮಾಡಲು ರೈತರು ಮುಂದಾಗುತ್ತಾರೆ.ಭತ್ತ ಮತ್ತು ಅಡಿಕೆಗೆ ಬೆಂಬಲ ಬೆಲೆ ಘೋಷಿಸಲು ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದ ಸಂಸದರು, ಸ್ಥಳೀಯ ಕಂದಾಯ ಮತ್ತು ಕೃಷಿ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಸ್ಥರಿಗೆ ಬೆಳೆ ವಿಮೆ, ರಸ್ತೆ, ಚರಂಡಿ, ಕುಡಿಯುವ ನೀರು, ಸ್ವತ್ತಿನ ಇ.ಖಾತೆ ಮುಂತಾದ ಮೂಲ ಭೂತ ಸೌಲಭ್ಯಗಳನ್ನು ಒದಗಿಸಿ ಜನರಿಗೆ ಸ್ಪಂದಿಸಬೇಕು. ಅಡಿಕೆಯಲ್ಲಿ ಯಾವ ಮಾರಕ ರೋಗಗಳು ಇಲ್ಲ ಎಂದು ತಜ್ಞರು ಮಾಹಿತಿ ನೀಡಿರುವುದರಿಂದ ರೈತರು ಅಡಿಕೆ ಬೆಳೆಗೆ ಮುಂದಾಗಿ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.

ADVERTISEMENT

ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡ ತೇಜಸ್ವಿ ಪಟೇಲ್‌ ಮಾತನಾಡಿ ರಾಜ್ಯ ಸರ್ಕಾರ ಕೈಗೊಂಡಿರುವ ಶಕ್ತಿ ಉಚಿತ ಬಸ್‌ ಸಂಚಾರ ಯೋಜನೆ ಯಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದು, ಇದನ್ನು ಸಾಧ್ಯವಾದರೆ ನಿಲ್ಲಿಸಿ, ಶಾಲಾ ಕಾಲೇಜುಗಳಿಗೆ ದಿನ ನಿತ್ಯ ಸಂಚರಿಸುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪ್ರಯಾಣ ಕಲ್ಪಿಸಬೇಕು ಮತ್ತು ರೈತರು ಉತ್ಪಾದಿಸುವ ಭತ್ತ ಮತ್ತು ಮೆಕ್ಕೆ ಜೋಳ ಧಾನ್ಯಗಳಿಗೆ ಸರ್ಕಾರ ಉತ್ತಮ ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಆಗ ರೈತರಿಗೆ ಹೆಚ್ಚಿನ ಲಾಭವಾಗುವುದರ ಮೂಲಕ ಬ್ಯಾಂಕ್‌ ಮತ್ತು ಸಹಕಾರ ಸಂಘಗಳಲ್ಲಿ ತೆಗೆದುಕೊಂಡಿರುವ ಸಾಲದ ಮರು ಪಾವತಿ ಸುಲಭವಾಗುತ್ತದೆ ಎಂದರು.

ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್‌ ಬ್ಯಾಂಕ್‌ ನಿರ್ದೇಶಕ ಮತ್ತು ಸಹಕಾರಿ ಧುರೀಣ ಜೆ.ಆರ್‌.ಷಣ್ಮುಖಪ್ಪ ಮಾತನಾಡಿ, ದಾಗಿನಕಟ್ಟೆ ಮತ್ತು ಯಲೋದಹಳ್ಳಿ ಗ್ರಾಮಗಳನ್ನು ಒಳಗೊಂಡ ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಈವರ್ಷ 1.75 ಕೋಟಿರೂಗಳ ಕೃಷಿ ಸಾಲ ಮತ್ತು 50 ಲಕ್ಷರೂಗಳ ಮಧ್ಯಮಾವಧಿ ಸಾಲ ನೀಡಲಾಗಿದ್ದು, ಮರುಪಾವತಿ ಸಮರ್ಪಕವಾಗಿದೆ ಎಂದರು.

ಶಾಸಕ ಕೆ.ಎಸ್‌.ಬಸವಂತಪ್ಪ ಮಾತನಾಡಿ ಚನ್ನಗಿರಿ ಮತ್ತು ಹೊನ್ನಾಳಿ ಡಿಪೋಗಳಿಂದ ಈಭಾಗದ ಜನತೆಯ ಅನುಕೂಲಕ್ಕಾಗಿ ವಿವಿಧ ಸ್ತಳಗಳಿಗೆ ಸರ್ಕಾರಿ ಬಸ್‌ ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದರು.ಸಭೆಯನ್ನು ಉದ್ದೇಶಿಸಿ ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್‌ ಮತ್ತು ಶಿಮುಲ್‌ ನಿರ್ದೇಶಕ ಎಚ್‌.ಕೆ.ಬಸಪ್ಪ, ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್‌ ನಿರ್ದೇಶಕ ಜಿ.ಎಸ್‌.ಸಂತೋಷ್‌, ದಾಗಿನಕಟ್ಟೆ ವಿ.ಎಸ್‌.ಎಸ್‌.ಎನ್‌ ಅಧ್ಯಕ್ಷ ಎಸ್‌.ಜಿ.ಮಹೇಶ್ವರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಓ.ಜಿ.ಕಿರಣ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಜಿ.ನಾಗರಾಜ್‌ ಮಾತನಾಡಿದರು.ಸಹಾಕಾರ ಸಂಘದ ನಿರ್ದೇಶಕರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಎಸ್‌.ಆರ್‌.ಸಂತೋಷ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.