ದಾವಣಗೆರೆ: ಇಡೀ ಜಗತ್ತಿಗೆ 12ನೇ ಶತಮಾನದಲ್ಲಿ ಕಾಯಕ ಶ್ರದ್ಧೆಯನ್ನು ಪರಿಚಯಿಸಿದವರು ಕಲ್ಯಾಣದ ಶರಣರು. ಅಂತಹವರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಕೂಡ ಒಬ್ಬರು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಶ್ಲಾಘಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಸಿ ಅವರು ಮಾತನಾಡಿದರು.
‘ಕಾಯಕದಿಂದ ಗಳಿಸಿದ ಸಂಪತ್ತನ್ನು ನಾವು ಬಳಸಿ, ಬೇರೆಯವರಿಗೂ ಹಂಚುವ ಮನೋಭಾವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳವುದರ ಜೊತೆಗೆ ಹಸಿದವರಿಗೆ ಅನ್ನ ನೀಡುವ ಕೆಲಸವನ್ನು ಮಾಡುವ ಮೂಲಕ ಎಲ್ಲರ ಮನೆಗಳು ಮಠಗಳಂತೆ ಕಾರ್ಯ ನಿರ್ವಹಿಸಬೇಕು’ ಎಂದರು.
‘ತಮ್ಮ ಜೀವಿತಾವಧಿಯುದ್ದಕ್ಕೂ ಸಾಮಾಜಿಕ ಸೇವೆಗಳ ಮೂಲಕ ವಿದ್ಯೆ, ಆಶ್ರಯ, ಅನ್ನದಂತಹ ತ್ರಿವಿಧ ದಾಸೋಹವನ್ನು ನೀಡಿ ಲಕ್ಷಾಂತರ ಬಡ ಮಕ್ಕಳಲ್ಲಿ ಜ್ಞಾನ ಜ್ಯೋತಿ ಬೆಳಗಿಸಿದ ಕೀರ್ತಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮಿಜೀಗಳಿಗೆ ಸಲ್ಲುತ್ತದೆ’ ಎಂದು ಸ್ಮರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಡಿಯುಡಿಸಿ ಯೋಜನಾಧಿಕಾರಿ ನಜ್ಮಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜನಾಯ್ಕ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಪ್ಪ ಎಸ್ಪಿ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅವಿತ್ ಬಿದರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಕೆ.ಎಚ್ ವಿಜಯ್ಕುಮಾರ್, ಗಂಗಾಮತ ಸಮಾಜದ ಅಧ್ಯಕ್ಷ ಬಿ.ಎಚ್ ಮಂಜುನಾಥ್, ಚೌಡಯ್ಯ ಗುರುಪೀಠದ ಉಪಾಧ್ಯಕ್ಷ ಮಂಜುನಾಥ ಡಿ. ಪುಟಗನಾಳ್, ಕಾರ್ಯದರ್ಶಿ ಮಹೇಂದ್ರ ಹೆಬ್ಬಾಳ್, ನಿಂಗರಾಜ ಹಾವನೂರು, ಎಸ್.ಎಂ ಸುರೇಶ್, ಯೋಗೇಶ್ ಹೊಸಕೆರೆ, ತಿಪ್ಪೇಶ್, ಶೋಭಾ ಮಂಜುನಾಥ, ಮೀನಾಕ್ಷಿ ವೇಂಕಟೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.