
ಮಾಯಕೊಂಡ: ಸಮೀಪದ ಕಬ್ಬೂರು ಗ್ರಾಮದಲ್ಲಿ 25ನೇ ವರ್ಷದ ಅಡಿಕೆ ರಾಶಿ ಪೂಜೆಯ ಸುಗ್ಗಿ ಸಂಭ್ರಮ ಮತ್ತು ರೈತರ ಧಾರ್ಮಿಕ ಜ್ಞಾನ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.
ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಭೂಮಿಯನ್ನು ಆರೋಗ್ಯದಿಂದ ನೋಡಿಕೊಳ್ಳಬೇಕು. ಕಳೆ ನಾಶಕ ಸಿಂಪಡಣೆಯಿಂದ ಭೂಮಿ ಸತ್ವ ಕಳೆದುಕೊಂಡು ಫಸಲು ವಿಷಯುಕ್ತವಾಗಿದೆ. ಭೂಮಿಯ ಸತ್ವ ಉಳಿಕೊಳ್ಳಬೇಕಿದೆ’ ಎಂದರು.
‘ರೈತರು ಸೋಮಾರಿಗಳಲ್ಲ, ಅಜ್ಞಾನಿಗಳಲ್ಲ. ಕೃಷಿ ಇಲಾಖೆಯ ವಿಜ್ಞಾನಿಗಳಿಗಿಂತ ಅನುಭವಿಗಳು’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರು ಬಸವ ಸ್ವಾಮೀಜಿ ಹೇಳಿದರು.
‘ಅಡಿಕೆ ಬೆಳೆಯಿಂದ ರೈತರು ಆರ್ಥಿಕವಾಗಿ ಸಧೃಢರಾಗುತ್ತಿದ್ದಾರೆ. ಏಕ ಬೆಳೆ ಬೆಳೆಯುವ ಬದಲು ಬಹು ಬೆಳೆ ಪದ್ದತಿಗೆ ತೆರೆದುಕೊಳ್ಳಬೇಕು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದರು.
‘ಅಡಿಕೆ ರಾಶಿ ಪೂಜೆ ಹೊಸ ಪ್ರಯತ್ನ. ಪೂರ್ವಜರ ಪದ್ದತಿಗಳನ್ನು ಮಕ್ಕಳಿಗೆ ತಿಳಿಸಬೇಕು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ತಿಳಿಸಿದರು.
ರೈತ ಹೆದ್ನೆ ಮುರಿಗೇಂದ್ರಪ್ಪ, ಕಬ್ಬೂರು ರಾಜೀವ್, ನಂದಿನಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಣ್ಣಗೌಡ್ರು, ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ವಿಶ್ವನಾಥ್, ಸಹಾಯಕ ತೋಟಗಾರಿಕಾ ಅಧಿಕಾರಿ ರಮೇಶ್, ಪ್ರಕಾಶ್ ಕುರೇಮಾಗೇನಹಳ್ಳಿ, ಕಬ್ಬೂರು ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.