ದಾವಣಗೆರೆ: ಇಲ್ಲಿನ ಲಿಂಗತ್ವ ಅಲ್ಪಸಂಖ್ಯಾತರ ಮೇಲೆಬೆಂಗಳೂರಿನಿಂದ ಬಂದ ಲಿಂಗತ್ವ ಅಲ್ಪಸಂಖ್ಯಾತರ ತಂಡವು ಹಲ್ಲೆ ನಡೆಸಿದೆ.
ಸಮುದಾಯದ ಹೋರಾಟಗಾರ್ತಿ & ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಎಸ್.ಮತ್ತು ಅವರ ಜತೆ ವಾಸವಿರುವ ಗೊಂಬೆ, ಜಾಹ್ನವಿ, ರಶ್ಮಿಕಾ, ಲಾಸ್ಯ, ಸತ್ಯಮ್ಮ, ವೀಣಾ, ಸುರಕ್ಷಾ, ಸನ್ನಿಧಿ, ಅರುಂಧತಿ, ಧನ್ಯ, ಕವಿತಾ, ಯಲ್ಲಮ್ಮ, ಛಾಯಾ ಅವರ ಮೇಲೆ ಕಬ್ಬಿಣದ ರಾಡ್, ಕಲ್ಲು ದೊಣ್ಣೆಗಳಿಂದ ಹಲ್ಲೆ ಮಾಡಲಾಗಿದೆ. ಅವರಲ್ಲಿ ಅರುಂಧತಿ ಅವರ ತಲೆಗೆ ಬಲವಾದ ಏಟು ಬಿದ್ದಿದೆ. ಲಾಸ್ಯ ಅವರಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ಬನಶಂಕರಿಯ ಪ್ರೇಮಮ್ಮ, ಅವರ ಸಂಗಡಿಗರಾದ ಕಸ್ತೂರಿ, ಸ್ಪಂದನಾ, ಅವಂತಿಕಾ, ಪ್ರೀತಿ, ಆಕ್ಷಯ, ಸಾನಿಯಾ, ಜಯಾ(ಲುಲ್ಲು), ದಾವಣಗೆರೆ ನಗರದ ಬಾಡಾ ಕ್ರಾಸ್ ಆಂಜನೇಯ ಮಿಲ್ ನಿವಾಸಿಗಳಾದ ಬಸವರಾಜ (ಅವಿನಾಶ), ಆರ್ಯ( ಸನಾವುಲ್ಲಾ) ಹೇಮಂತ್, ಮಂಜು, ಪ್ರಕಾಶ ಹಲ್ಲೆ ನಡೆಸಿದ ಆರೋಪಿಗಳು. 10 ಗ್ರಾಂ ಚಿನ್ನದ ಸರವನ್ನೂ ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೆಟಿಜೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನವಿ: ‘ನಮ್ಮ ಮೇಲೆ ಹಲ್ಲೆ ನಡೆಯುತ್ತಿದ್ದಾಗ ಪೊಲೀಸರಿಗೆ ತಿಳಿಸಿದರೆ ಅವರು ಮಾನವೀಯ ನೆಲೆಯಲ್ಲಿ ಕ್ರಮ ಕೈಗೊಳ್ಳುವ ಬದಲು ನಮಗೆ ಮನೆ ಬಾಡಿಗೆ ನೀಡಿರುವ ಮಾಲೀಕರಿಗೇ ಯಾಕೆ ಬಾಡಿಗೆ ನೀಡಿದ್ದೀರಿ ಎಂದು ಪೊಲೀಸರು ಬೈದಿದ್ದಾರೆ. ನಮ್ಮ ಬಗ್ಗೆ ನಿಂದನಾ ಪದವನ್ನು ಬಳಸಿದ್ದಾರೆ’ ಎಂದು ಚೈತ್ರಾ ಮತ್ತು ಸಂಗಡಿಗರು ಎಸ್ಪಿ ಕಚೇರಿಯಲ್ಲಿ ಎಎಸ್ಪಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಜಬೀನಾಖಾನಂ, ಕರಿಬಸಪ್ಪ, ಸತೀಶ್ ಅರವಿಂದ್, ಅಕ್ಷತಾ ಕೆ.ಸಿ. ಅವರೂ ಇದ್ದರು.
ಹಲ್ಲೆ ಮಾಡಿದವರ ಕ್ರಮ ಕೈಗೊಳ್ಳುವುದಾಗಿ ಎಎಸ್ಪಿ ರಾಜೀವ್, ಡಿವೈಎಸ್ಪಿ ನಾಗೇಶ್ ಐತಾಳ್, ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ನಾಗಮ್ಮ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.