ADVERTISEMENT

ಎವಿಕೆ ಕಾಲೇಜಿನ ಹಳೆ ವಿದ್ಯಾರ್ಥಿನಿಯರ ಸಮಾಗಮ

​ಪ್ರಜಾವಾಣಿ ವಾರ್ತೆ
Published 18 ಮೇ 2022, 16:19 IST
Last Updated 18 ಮೇ 2022, 16:19 IST
ದಾವಣಗೆರೆಯ ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿನಿಯರ ಸಭೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್ ಉದ್ಘಾಟಿಸಿದರು.
ದಾವಣಗೆರೆಯ ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿನಿಯರ ಸಭೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್ ಉದ್ಘಾಟಿಸಿದರು.   

ದಾವಣಗೆರೆ: ನಗರದ ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ ಹಳೆಯ ವಿದ್ಯಾರ್ಥಿನಿಯರ ಸಮಾಗಮ ಮಂಗಳವಾರ ನಡೆಯಿತು. ರಾಷ್ಟ್ರ–ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿನಿಯರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅನುಭವವನ್ನು ಹಂಚಿಕೊಂಡರು.

ಸಾಹಿತ್ಯ, ಸಂಗೀತ, ಕ್ರೀಡೆ, ವಿಜ್ಞಾನ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವಂತಾಗಲು ಎ.ವಿ.ಕೆ. ಕಾಲೇಜಿನ ಅಧ್ಯಾಪಕರೇ ಕಾರಣ ಎಂದು ವಿದ್ಯಾರ್ಥಿನಿಯರು ಸ್ಮರಿಸಿದರು. ಕಾಲೇಜಿನ ಏಳ್ಗೆಗೆ ಎಲ್ಲರೂ ತನು–ಮನ–ಧನದಿಂದ ಶ್ರಮಿಸೋಣ ಎಂದು ಆಶಿಸಿದರು.

ಹಳೆಯ ವಿದ್ಯಾರ್ಥಿನಿಯರ ಸಂಘದ ಕಾರ್ಯದರ್ಶಿ ಮಾಧುರಿ, ‘ಎ.ವಿ.ಕೆ. ಕಾಲೇಜು ಇಂದಿಗೂ ಜಿಲ್ಲೆಯಲ್ಲಿ ಯಾವ ಕಾಲೇಜಿಗೂ ಕಡಿಮೆಯಿಲ್ಲ. ಇಲ್ಲಿನ ಅಧ್ಯಾಪಕರು ಕೇವಲ ಪಾಠಕ್ಕೆ ಸೀಮಿತರಾಗಿಲ್ಲ. ಪಠ್ಯ–ಪಠ್ಯೇತರ ಚಟುವಟಿಕೆ, ಸಾಮಾಜಿಕ ಬದ್ಧತೆ ಇಟ್ಟುಕೊಂಡು ನಮ್ಮನ್ನು ಸುಂದರ ಶಿಲೆಯನ್ನಾಗಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್, ‘ಎ.ವಿ.ಕೆ. ಮಹಿಳಾ ಕಾಲೇಜಿನ ಹಳೆಯ ವಿದ್ಯಾರ್ಥಿನಿಯರೇ ನಮ್ಮ ಸಮಾಜಕ್ಕೆ ನಿಜವಾದ ಆಸ್ತಿ. ನಿಮ್ಮಿಂದ ಸಮಾಜ ಮತ್ತು ಸಂಸ್ಕೃತಿಗೆ ಮತ್ತಷ್ಟು ಸೇವೆ ಸಲ್ಲಿಸುವ ಕಾರ್ಯವಾಗಲಿ’ ಎಂದು ಆಶಿಸಿದರು.

ಸಹನಾ ಪ್ರಾರ್ಥಿಸಿದರು. ಹಳೆಯ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ಶ್ವೇತಾ ಗಾಂಧಿ ಸ್ವಾಗತಿಸಿದರು. ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರಾದ ಡಾ.ಅನುರಾಧ ಪಿ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಚಾಲಕ ಪ್ರೊ.ಆರ್.ಆರ್. ಶಿವಕುಮಾರ್ ಮಾತನಾಡಿದರು. ಹಳೆಯ ವಿದ್ಯಾರ್ಥಿನಿ ಪ್ರಕೃತಿ ವಂದಿಸಿದರು. ಸಭೆಯಲ್ಲಿ ನಿವೃತ್ತ ಪ್ರಾಧ್ಯಾಪಕರು, ಅಧ್ಯಾಪಕರು ಇದ್ದರು. ಸಭೆಯ ನಂತರ ಹಳೆಯ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.