ದಾವಣಗೆರೆ: ಕ್ಯಾನ್ಸರ್ ಬಂದರೆ ಹೆದರುವುದಕ್ಕಿಂತ ಧೈರ್ಯದಿಂದ ಎದುರಿಸಬೇಕು. ವಿಶ್ವಾಸದಿಂದ ಸರಿಯಾದ ಚಿಕಿತ್ಸೆ ತೆಗೆದುಕೊಂಡರೆ ಕ್ಯಾನ್ಸರ್ ಮೆಟ್ಟಿ ನಿಲ್ಲಬಹುದು. ಪ್ರಾರ್ಥಿಸಿ-ಎದುರಿಸಿ-ಜಯಶೀಲರಾಗಿ ಎಂಬ ಧ್ಯೇಯದೊಂದಿಗೆ ‘ಕ್ಯಾನ್ಸರ್ ನಡೆ – 2021’ ಭಾನುವಾರ ನಡೆಯಿತು.
ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ವತಿಯಿಂದ ನಗರದ ಟಿ.ವಿ.ಸ್ಟೇಷನ್ ಕೆರೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಅಭಿಯಾನವನ್ನು ಮೇಯರ್ ಎಸ್.ಟಿ. ವೀರೇಶ್ ಹಾಗೂ ಆಯುಕ್ತ ವಿಶ್ವನಾಥ್ ಮುದಜ್ಜಿ ಜಂಟಿಯಾಗಿ ಜಾಗೃತಿ ಫಲಕಗಳನ್ನು ಅನಾವರಣ ಮಾಡಿ ಚಾಲನೆ ನೀಡಿದರು.
ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಅಧ್ಯಕ್ಷ ಡಾ. ಶ್ರೀಶೈಲ ಬ್ಯಾಡಗಿ, ಭಾರತೀಯ ರೆಡ್ ಕ್ರಾಸ್ ಸೋಸೈಟಿ ಹಾಗೂ ಸ್ವಯಂಪ್ರೇರಿತ ರಕ್ತದಾನಿಗಳ ಒಕ್ಕೂಟ ಲೈಫ್ ಲೈನ್ ಚೇರ್ಮನ್ ಡಾ.ಎ.ಎಂ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಅಭಿಯಾನದಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಆಸಕ್ತರು ಭಾಗವಹಿಸಿದ್ದರು.
ಪತ್ರಕರ್ತ ಮಂಜುನಾಥ್ ಕಾಡಜ್ಜಿ, ಭಾರತೀಯ ವಿಕಾಸ ಪರಿಷತ್ತಿನ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ, ದಾವಣಗೆರೆ ಘಟಕದ ಅಧ್ಯಕ್ಷ ಜಯರುದ್ರೇಶ್, ದಾವಣಗೆರೆ ರೋಟರಿ ಕ್ಲಬ್ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಓಂಕಾರಪ್ಪ, ಲೈಫ್ ಲೈನ್ ಕಾರ್ಯದರ್ಶಿ ಅನಿಲ್ ಬಾರಂಗಳ್, ಪಾಲಿಕೆ ಸದಸ್ಯ ವೀರೇಶ್, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಅವರೂ ಇದ್ದರು.
ವೈದ್ಯರು, ಎಂಜಿನಿಯರ್ಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕ್ಯಾನ್ಸರ್ ಜಯಿಸಿರುವ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ರಾಯಾಭಾರಿ ಅರುಣ್ ಕುಮಾರ್ ಆರ್.ಟಿ. ಹಾಗೂ ವಿಶ್ವಾಸದಿಂದ ಕ್ಯಾನ್ಸರ್ ಎದುರಿಸಿ ಎಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಆರ್.ಜಿ. ಕಾಮರ್ಸ್ ಮತ್ತು ಮ್ಯಾನೇಜ್ ಮೆಂಟ್ ಕಾಲೇಜಿನ ಅಧ್ಯಕ್ಷೆ ಶ್ವೇತಾ ಗಾಂಧಿ ಅಭಿಯಾನದಲ್ಲಿ ಭಾಗವಹಿಸಿ ಮೆರಗು ನೀಡಿದರು.
ಕಲಾವಿದ ರವೀಂದ್ರ ಅರಳಗುಪ್ಪಿ ಅವರ ಕಲಾಕೃತಿಗಳು ಗಮನ ಸೆಳೆದವು. ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಕಾರ್ಯದರ್ಶಿ ಕ್ಯಾನ್ಸರ್ ತಜ್ಞ ಡಾ. ಸುನೀಲ್ ಬ್ಯಾಡಗಿ ಅಭಿಯಾನವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.