ಶಾಸಕ ಬಸವರಾಜು ವಿ. ಶಿವಗಂಗಾ.
ಚನ್ನಗಿರಿ: ‘ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಲು ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಅಣ್ಣನವರು ಕಾರಣರಾಗಿದ್ದು, ಅವರಿಗೆ ತುಂಬಾ ಗೌರವ ಕೊಡುತ್ತೇನೆ. ಅವರು ನನ್ನ ಮೇಲೆ ಮಾಡಿರುವ ಆರೋಪಗಳು ಸುಳ್ಳಾಗಿದ್ದು, ನಾನು ಅವರು ಹೇಳಿರುವಂತೆ ಯಾವುದೇ ಕಾಮಗಾರಿಗಳಿಗೂ ಮರು ಭೂಮಿಪೂಜೆ ಮಾಡಿಲ್ಲ’ ಎಂದು ಶಾಸಕ ಬಸವರಾಜು ಶಿವಗಂಗಾ ತಿಳಿಸಿದರು.
‘ಮಾಜಿ ಶಾಸಕರು ಹೇಳಿರುವಂತೆ ಅವರ ಅವಧಿಯಲ್ಲಿ ಮಂಜೂರಾದ ಗುರುಭವನ ₹ 4 ಕೋಟಿ, ದೇವರಹಳ್ಳಿ ಸಮುದಾಯ ಭವನ ₹ 5 ಕೋಟಿ, ಚಿಕ್ಕೂಡ ಸಮುದಾಯ ಭವನಕ್ಕೆ ₹ 1 ಕೋಟಿ ಈ ಕಾಮಗಾರಿಗಳಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಣಕಾಸು ಇಲಾಖೆಯಿಂದ ಅನುದಾನ ಮೀಸಲಿಡದ (ಅನಧಿಕೃತ ಟಿಪ್ಪಣಿ) ಕಾರಣ ತಡೆ ನೀಡಲಾಗಿತ್ತು’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಹಾಗಾಗಿ ಆಯಾ ಇಲಾಖೆಗಳು ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡ ಕಾಮಗಾರಿಗಳ ಟೆಂಡರ್ ಅನ್ನು ರದ್ದುಗೊಳಿಸಿದ್ದವು. ನಂತರ ನಾನು ಶಾಸಕನಾಗಿ ಆಯ್ಕೆಯಾದ ನಂತರ ಈ ಎಲ್ಲ ಕಾಮಗಾರಿಗಳು ಅವಶ್ಯ ಇವೆ ಎಂದು ಹೇಳಿ ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸಿದ ನಂತರ ಆ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದ್ದೇನೆಯೇ ಹೊರತು ಮರು ಭೂಮಿಪೂಜೆ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಸಂತೇಬೆನ್ನೂರು ಘಟಕದ ಅಧ್ಯಕ್ಷ ಜಬೀವುಲ್ಲಾ, ತುಮ್ಕೋಸ್ ನಿರ್ದೇಶಕ ವಿಜಯ್ ಕುಮಾರ್ ಗೌಡ್ರು, ಪುರಸಭೆ ಸದಸ್ಯ ಸೈಯದ್ ಗೌಸ್ ಪೀರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಇಮ್ರಾನ್, ಶ್ರೀಕಾಂತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.