ದಾವಣಗೆರೆ: ಮಹನೀಯರ ಜಯಂತಿಗಳು ಆಚರಣೆಯಾಗದೆ ಸೀಮಿತವಾಗದೇ, ಅವರ ಆದರ್ಶಗಳ ಅನುಸರಣೆ ಆಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.
ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯ ಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅನಂದ್, ‘ಇವತ್ತಿನ ದಿನ ನಾವು ನೀರನ್ನು ಹಣಕೊಟ್ಟು ಕುಡಿಯುವಂತಹ ಪರಿಸ್ಥಿತಿಗೆ ಬಂದಿದೆ. ನಾವೆಲ್ಲರೂ ಭಗೀರಥ ಮಹಾಋಷಿ ಅವರಂತೆ ನಮ್ಮ ಮುಂದಿನ ಪೀಳಿಗೆ ಗೋಸ್ಕರ ನೀರನ್ನು ಉಳಿಸುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.
ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಶ್ ಮಾತನಾಡಿ, ‘ಮನುಕುಲಕ್ಕೆ ಭಗೀರಥರ ಕೊಡುಗೆ ಅಪಾರ. ನಾವು ಆಧುನಿಕ ಭಗೀರಥ ಆಗಬೇಕು. ನೀರು ವ್ಯರ್ಥವಾಗುವುದನ್ನು ತಡೆಯಲು, ಜಲ ಸಂರಕ್ಷಣೆ ಮಾಡಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.
ಸಮಾಜದ ಮುಖಂಡ ಅಂಜಿನಪ್ಪ ಉಪನ್ಯಾಸ ನೀಡಿ, ‘ಗಂಗೆಯನ್ನು ಭೂಮಿಗೆ ಇಳಿಸಿದ ಭಗೀರಥ ಮಹರ್ಷಿ, ಗಂಗೆ ಕೇವಲ ನೀರಲ್ಲ, ಅದು ಪ್ರಜ್ಞೆಯ ಪ್ರವಾಹ. ಭಗೀರಥ ಮಹರ್ಷಿ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲದೆ ಕರ್ಮ ತತ್ವದ ಮೂಲಕ ಇಡೀ ಮನುಕುಲದ ಸಕಲ ಜೀವರಾಶಿಗಳಿಗೂ ಅನುಕೂಲ ಮಾಡಿದ ಮಹಾಪುರುಷ’ ಎಂದರು.
ಸಮಾಜದ ರಾಜ್ಯ ಉಪಾಧ್ಯಕ್ಷ ಬಸವರಾಜಪ್ಪ ಹಾಗೂ ಭರತ್ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ರುದ್ರೇಶ್ ಚಿರಡೋಣಿ ಹಾಗೂ ಸಂಗಡಿಗರಿಂದ ಭಗೀರಥ ಮಹರ್ಷಿ ಅವರ ಹಾಡುಗಳನ್ನು ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಉಪ್ಪಾರ ಸಮಾಜದ ಮಾಜಿ ಉಪಮೇಯರ್ ಮಂಜುಳಾ, ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ, ಶಿಕ್ಷಣತಜ್ಞ ಬಸವರಾಜ್ ಸಾಗರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.