ADVERTISEMENT

ಬಿಜೆಪಿಯ ಅಧಿಕಾರ ದಾಹದಿಂದ ಕೋಲಾಹಲ: ಟೀಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 4:55 IST
Last Updated 20 ಡಿಸೆಂಬರ್ 2020, 4:55 IST
ಡಿ.ಬಸವರಾಜ್
ಡಿ.ಬಸವರಾಜ್   

ದಾವಣಗೆರೆ: ವಿಧಾನ ಪರಿಷತ್‍ನಲ್ಲಿ ಇತ್ತಿಚೆಗೆ ನಡೆದ ಗಲಾಟೆ, ಗದ್ದಲ, ಕೋಲಾಹಲಕ್ಕೆ ಬಿಜೆಪಿಯ ಅಧಿಕಾರ ದಾಹವೇ ಕಾರಣ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ವಕ್ತಾರ ಡಿ. ಬಸವರಾಜ್ ಆರೋಪಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿ ನಡೆದ ಘಟನೆ ದೇಶದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಚುಕ್ಕೆ. ಅಂದಿನ ಕಲಾಪದ ಬೆಲ್ ಆಗುತ್ತಿರುವಾಗ, ಸಭಾಪತಿ ಪೀಠಕ್ಕೆ ಬಾರದಂತೆ ತಡೆಯಲು ಬಾಗಿಲಿಗೆ ಬೀಗ ಹಾಕಿದ ಬಿಜೆಪಿಯು ಸಭಾಪತಿಯವರ ಅನುಮತಿ ಇಲ್ಲದೆ ಉಪಸಭಾಪತಿಯನ್ನು ಪೀಠದ ಮೇಲೆ ಕೂರಿಸಿ ಕಲಾಪ ನಡೆಸಲು ಹೊರಟಿರುವುದೇ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯರು ಹಾಡುಹಗಲೇ ಸಂವಿಧಾನಕ್ಕೆ ಅಪಚಾರವೆಸಗಿದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ಸಚಿವರು ಆ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಖಂಡನೀಯ ಎಂದು ಟೀಕಿಸಿದ್ದಾರೆ.

ಸಂವಿಧಾನ ವಿರೋಧಿ ಗೋ ಹತ್ಯೆ ನಿಷೇಧ ಹಾಗೂ ಲವ್‍ಜಿಹಾದ್ ಮಸೂದೆಗಳನ್ನು ಅಂಗೀಕರಿಸಲು ಮೇಲ್ಮನೆಯಲ್ಲಿ ಸ್ಪಷ್ಟ ಬಹುಮತವಿಲ್ಲದ ಕಾರಣ ಈ ರೀತಿ ಅಡ್ಡ ದಾರಿ ಹಿಡಿದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.