ಮಾಯಕೊಂಡ: ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ದಿನೇ ದಿನೇ ಜನಸಂದಣಿ ಹೆಚ್ಚುತ್ತಿದ್ದು, ಗ್ರಾಹಕರಿಗೆ ಬ್ಯಾಂಕ್ ವ್ಯವಹಾರ ಕಷ್ಟವಾಗುತ್ತಿದೆ. ಶೀಘ್ರ ಸುಗಮ ವ್ಯವಹಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಉಳ್ಳಾಗಡ್ಡೆ ಲಕ್ಷ್ಮಣ್ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
‘ಗ್ರಾಮದಲ್ಲಿನ ಕೆನರಾ ಬ್ಯಾಂಕ್ ಶಾಖೆಗೆ ಗ್ರಾಹಕರು ಬಂದರೆ ಆ ದಿನದ ಬೇರೆ ಕೆಲಸಗಳನ್ನು ಸಂಪೂರ್ಣ ಬದಿಗಿಟ್ಟು ಬರಬೇಕಿದೆ. ಈ ಭಾಗದಲ್ಲಿ ಬಹುತೇಕ ಕೂಲಿಕಾರರೇ ಇರುವುದರಿಂದ ಬ್ಯಾಂಕ್ನ ವ್ಯವಹಾರಕ್ಕಾಗಿ ತಮ್ಮ ಕೂಲಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಜನಸಂದಣಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಬ್ಯಾಂಕ್ನ ಸಿಬ್ಬಂದಿ ವಿಫಲರಾಗಿದ್ದಾರೆ. ನಿತ್ಯವೂ ಗ್ರಾಹಕರು ಹಾಗೂ ಸಿಬ್ಬಂದಿ ನಡುವೆ ಜಗಳ ತಪ್ಪಿದ್ದಲ್ಲ’ ಎಂದು ದೂರಿದರು.
‘ಶಾಖೆಯಲ್ಲಿದ್ದ ವ್ಯವಸ್ಥಾಪಕರು ವರ್ಗಾವಣೆಯಾಗಿದ್ದು, ಆ ಸ್ಥಾನಕ್ಕೆ ಬೇರೊಬ್ಬರನ್ನು ಶೀಘ್ರ ನೇಮಿಸಬೇಕು. ಜೊತೆಗೆ ಹಣ ಪಾವತಿ ಹಾಗೂ ಹಣ ಬಿಡಿಸಿಕೊಳ್ಳಲು ಒಂದೇ ಕೌಂಟರ್ ಬಳಸಲಾಗುತ್ತಿದೆ. ಶಾಖೆಯಲ್ಲಿ ತ್ವರಿತವಾಗಿ ಎರಡು ಕೌಂಟರ್ ತೆರೆಯಬೇಕು. ಆಗ ಜನಸಂದಣಿ ಕೊಂಚ ತಗ್ಗಲಿದೆ. ಶೀಘ್ರ ಈ ಕೆಲಸಗಳನ್ನು ಮಾಡುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕಿದೆ’ ಎಂದು ಲಕ್ಷ್ಮಣ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.