ದಾವಣಗೆರೆ:ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಗುರುವಾರ ಜಾಗೃತಿ ಜಾಥಾ ನಡೆಯಿತು.
ಚೈಲ್ಡ್ ಲೈನ್ ಕೊಲ್ಯಾಬ್, ಡಾನ್ ಬಾಸ್ಕೊ ಚಾರಿಟಬಲ್ ಸೊಸೈಟಿ, ಗ್ರಾಮ ಪಂಚಾಯಿತಿ ಕಕ್ಕರಗೊಳ್ಳ, ಚೈಲ್ಡ್ ಲೈನ್ ಇಂಡಿಯಾ ಫೌಂಡೇಷನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಮಕ್ಕಳ ಸಹಾಯವಾಣಿ ಕೊಲ್ಯಾಬ್ ಸಂಯೋಜಕ ಕೊಟ್ರೇಶ್ ಟಿ.ಎಂ., ‘ಬಾಲ್ಯವಿವಾಹ, ಭಿಕ್ಷಾಟನೆಗೆ ತಳ್ಳುವುದು, ಬಾಲ ಕಾರ್ಮಿಕ ಪದ್ಧತಿ ಸೇರಿ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಮಕ್ಕಳ ಮೇಲಿನ ದೌರ್ಜನ್ಯ ತಡೆ ಬರಿ ಕಾನೂನಿನಿಂದ ಮಾತ್ರ ಸಾದ್ಯವಿಲ್ಲ. ಕುಟುಂಬ, ಸಮುದಾಯ, ಸರ್ಕಾರ, ವಿವಿಧ ಇಲಾಖೆಗಳು, ಸಂಘಟನೆಗಳು, ಯುವಕ-ಯುವತಿಯರು, ಪಂಚಾಯಿತಿಗಳೂ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.
‘ಸಂಕಷ್ಟದಲ್ಲಿರುವ ಮಕ್ಕಳಿಗೆ ಸಹಾಯಮಾಡಲು ತಪ್ಪದೆ ಉಚಿತ ಸಹಾಯವಾಣಿ– 1098ಕ್ಕೆ ಕರೆಮಾಡಿ’ ಎಂದು ಮಕ್ಕಳ ಸಹಾಯವಾಣಿ ಕೊಲ್ಯಾಬ್ ತಂಡದ ಸದಸ್ಯ ಮಂಜುನಾಥ ಡಿ. ಕೋರಿದರು.
ಪೋಷಕತ್ವ ಯೋಜನೆಯ ಸಂಯೋಜಕರಾದ ವೈ.ರಾಮನಾಯ್ಕ, ಪಿಡಿಒ ರಾಜಪ್ಪ, ಗ್ರಾಮ ಲೆಕ್ಕಾಧಿಕಾರಿ ಹಾಲೇಶ್ವರಿ ಕೆ., ತೆರೆದ ತಂಗುದಾಣ ಯೋಜನೆಯ ಕಾರ್ಯಕರ್ತರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.